ವಿಜಯಸಾಕ್ಷಿ ಸುದ್ದಿ, ಧಾರವಾಡ: ಮೈಕ್ರೋ ಫೈನಾನ್ಸ್, ವಿವಿಧ ಹಣಕಾಸು ಸಂಸ್ಥೆ ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿಯಲ್ಲಿ ನಿಯಮ ಬಾಹಿರವಾಗಿ ನಡೆದುಕೊಂಡಲ್ಲಿ ತಕ್ಷಣ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಅವರು ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ಆಗುತ್ತಿರುವ ಕಿರಕುಳ ಹಿನ್ನೆಲೆಯಲ್ಲಿ ಮೈಕ್ರೋ ಫೈನಾನ್ಸ್, ಫೈನಾನ್ಸ್ ಕಾರ್ಪೊರೇಷನ್ಸ್, ಲೇವಾದೇವಿಗಾರರು, ಗಿರವಿದಾರರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಕ್ರೋ ಫೈನಾನ್ಸ್ ಗಳೂ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ವ್ಯವಹಾರ ನಡೆಸಬೇಕು. ಸಾಲದ ಕಾರಣಕ್ಕೆ ಜೀವ ಹಾನಿ ಆಗಬಾರದು. ನಿರ್ದಿಷ್ಟಪಡಿಸಿರುವ ನಿಯಮಗಳ ಚೌಕಟ್ಟಿನಲ್ಲಿ ಸಾಲ ವಸೂಲಾತಿ ಆಗಬೇಕೇ ಹೊರತು, ಯಾವುದೇ ರೀತಿಯಲ್ಲಿ ಸಾಲಗಾರರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ದೂರು ಬಂದಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ವಿತರಣೆ ಮಾಡಬೇಕು. ನಿಯಮ ಮೀರಿ ಸಾಲ ನೀಡಿ ಸಾಲಗಾರರ ಮೇಲೆ ದಬ್ಬಾಳಿಕೆ ನಡೆಸಿದಲ್ಲಿ ಅದಕ್ಕೆ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ತಿಳಿಸಿದರು.
ಸಾಲ ಪಡೆಯುವ ವ್ಯಕ್ತಿಗೆ ಸಾಲ ಎಷ್ಟು, ಬಡ್ಡಿದರ, ಕಂತುಗಳು, ವಸೂಲಿ ಸ್ಥಳ, ವಸೂಲುಗಾರ ಯಾರು ಮುಂತಾದ ವಿವರ ಇರುವ ಕಾರ್ಡ್ ನೀಡಬೇಕು. ಮತ್ತು ತಮ್ಮ ಸಂಸ್ಥೆಯ ಕಚೇರಿಯಲ್ಲಿ ಅಥವಾ ವ್ಯವಹಾರದ ನಿರ್ದಿಷ್ಟ ಸ್ಥಳದಲ್ಲಿ ತಮ್ಮ ಮೈಕ್ರೊ ಫೈನಾನ್ಸ್ ಆರ್ಥಿಕ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾದ ಫಲಕವನ್ನು ಸಾರ್ವಜನಿಕರಿಗೆ ಅಥವಾ ಗ್ರಾಹಕರಿಗೆ ಕಾಣುವಂತೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮೈಕ್ರೊಫೈನಾನ್ಸ್ ಸಾಲ ವಸೂಲು ಮಾಡುವವರು ಸಾಲಗಾರರ ಜೊತೆ ಮಾನವೀಯತೆಯಿಂದ ನಡೆದುಕೊಳ್ಳುವದನ್ನು ಕಲಿಯಬೇಕು. ಕೇವಲ ವ್ಯಾಪಾರದ ದೃಷ್ಟಿಯಿಂದ ನಡೆದುಕೊಂಡಿದ್ದು ಕಂಡುಬಂದಲ್ಲಿ ದೂರು ಬರದೇ ಇದ್ದರೂ ಸೋಮೋಟೋ ಕೇಸ್ ದಾಖಲಿಸಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
ಸಹಾಯವಾಣಿಗೆ ಕರೆ ಮಾಡಿ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸೇರಿದಂತೆ ಇತರೆ ಯಾವುದೇ ಹಣಕಾಸು ಸಂಸ್ಥೆಯವರು ಸಾಲ ವಸೂಲಾತಿಯಲ್ಲಿ ಕಿರುಕುಳ ನೀಡಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಅಥವಾ ಟೋಲ್ ಫ್ರೀ ನಂಬರ್ಗೆ ಕರೆ ಮಾಡಿ, ಮಾಹಿತಿ ನೀಡಬಹುದು ಅಥವಾ ದೂರು ನಿವಾರಣಾ ಕೇಂದ್ರಕ್ಕೆ ಖುದ್ದಾಗಿ ಬಂದು ದಾಖಲೆಗಳೊಂದಿಗೆ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಮಾತನಾಡಿ, ಮೈಕ್ರೊ ಫೈನಾನ್ಸ್ ಹಾಗೂ ಇತರ ಸಾಲ ನೀಡುವ ಸಂಘಗಳು ಗ್ರಾಮೀಣ ಭಾಗದಲ್ಲಿ ಸಾಲ ವಸೂಲಾತಿಗೆ ಒತ್ತಡ ಹಾಕುತ್ತಿರುವ ಮಾಹಿತಿ ಬಂದಿದೆ. ಇವುಗಳನ್ನು ಬೀಟ್ ಪೊಲೀಸ್ ಹಾಗೂ ಇತರ ಮೂಲಗಳ ಮೂಲಕ ಪರಿಶೀಲಿಸಲಾಗುತ್ತಿದೆ. ಅಂತಹ ಪ್ರಕರಣಗಳು ಖಚಿತಪಟ್ಟಲ್ಲಿ ಅಂತಹ ಸದಸ್ಯರ ಹಾಗೂ ಸಂಬAಧಿಸಿದವರ ಮೇಲೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸುವದಾಗಿ ತಿಳಿಸಿದರು.
ಆರ್.ಬಿ.ಐ.ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಹಾಗೂ ಧಾರವಾಡ ಜಿಲ್ಲಾ ನೋಡಲ್ ಅಧಿಕಾರಿ ಅರುಣಕುಮಾರ ಮಾತನಾಡಿ, ಮೈಕ್ರೊ ಫೈನಾನ್ಸ್ನವರು ಸಾಲ ಕೊಡುವಾಗ ಯಾವುದಕ್ಕೆ ಸಾಲ, ಅವರ ಮರುಪಾವತಿ ಶಕ್ತಿ, ಉಪಯುಕ್ತತೆ ತಿಳಿದುಕೊಳ್ಳಬೇಕು. ನೀಡುವ ಸಾಲವು ಸಾಮಾನ್ಯ ಜನರ ಸ್ವಯಂ ಉದ್ಯೋಗ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜಕವಾಗಬೇಕು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು. ಜಿಲ್ಲಾ ಅಗ್ರಣಿ ಬ್ಯಾಂಕ್ನ ವ್ಯವಸ್ಥಾಪಕ ಪ್ರಭುದೇವ ಎನ್.ಜಿ ಹಾಗೂ ಸಹಕಾರಿ ಸಂಘಗಳ ಉಪನಿಬಂಧಕ ರಮೇಶ ಬಗಲಿ ವಿವಿಧ ಹಣಕಾಸು ಸಂಸ್ಥೆಗಳ ಮಾಹಿತಿ ಹಾಗೂ ಅವುಗಳ ನಡೆಸುವ ವ್ಯವಹಾರದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾAವಿ, ಜಿಲ್ಲೆಯ ವಿವಿಧ ತಾಲೂಕುಗಳ ಪೊಲೀಸ್ ಅಧಿಕಾರಿಗಳು, ತಹಸೀಲ್ದಾರರು, ಸಹಾಯಕ ನಿಬಂಧಕರು ಸೇರಿದಂತೆ ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸ್ದಾರರು, ವಿವಿಧ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು, ಲೇವಾದೇವಿದಾರರು, ಗಿರಿವಿದಾರರು ಉಪಸ್ಥಿತರಿದ್ದರು.
**ಬಾಕ್ಸ್**
ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಮಾತನಾಡಿ, ನಿನ್ನೆ ದಿನ ಹುಬ್ಬಳ್ಳಿ ಕಮರಿಪೇಟೆಯಲ್ಲಿ ಮೈಕ್ರೊ ಫೈನಾನ್ಸ್ ಸಾಲ ವಸೂಲಾತಿ ಕಿರುಕಳದ ಮೊದಲ ಪ್ರಕರಣ ದಾಖಲಾಗಿದೆ. ನೋಂದಾಯಿತ ಎಲ್ಲ ತರಹದ ಹಣಕಾಸು ಸಂಸ್ಥೆಗಳ ನವೀಕರಣ ಹಾಗೂ ನೋಂದಣಿ ಸಮಯದ ಕರಾರುಗಳನ್ನು ಒಪ್ಪಂದದ ಪ್ರಕಾರ ಪೂರೈಸಿರುವ ಕುರಿತು ಪರಿಶೀಲಿಸಿ, ವರದಿ ನೀಡಲು ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ ಎಂದರು.