ವಿಜಯಸಾಕ್ಷಿ ಸುದ್ದಿ, ಗದಗ: ಅಖಿಲ ಕರ್ನಾಟಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಮಹಿಳಾ ವಿವಿಧೋದ್ದೇಶಗಳ ಸಂಘದ ಮಾಸಿಕ ಸಭೆಯಲ್ಲಿ ಕ್ಯಾನ್ಸರ್ ಕುರಿತು ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ವೀಣಾ ತಿರ್ಲಾಪೂರ್ ಮಾತನಾಡಿ, ಕ್ಯಾನ್ಸರ್ ಎಂಬ ಪದ ಕೇಳಿದಾಗಲೇ ಜನರಲ್ಲಿ ಭಯ ಉಂಟಾಗುತ್ತದೆ. ಆದರೆ ತಿಳುವಳಿಕೆ, ಜಾಗೃತಿ ಮತ್ತು ಸಮಯೋಚಿತ ಚಿಕಿತ್ಸೆ ಇದ್ದರೆ ಕ್ಯಾನ್ಸರ್ನ್ನು ಗೆಲ್ಲುವುದು ಸಾಧ್ಯ. ಕ್ಯಾನ್ಸರ್ ಎಂದರೆ ದೇಹದ ಕೋಶಗಳು ನಿಯಂತ್ರಣವಿಲ್ಲದೆ ಬೆಳೆಯುವುದರಿಂದ ಉಂಟಾಗುವ ರೋಗ. ಧೂಮಪಾನ, ಮದ್ಯಪಾನ, ಅಸ್ವಸ್ಥ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಪರಿಸರ ಮಾಲಿನ್ಯವು ಕ್ಯಾನ್ಸರ್ಗೆ ಪ್ರಮುಖ ಕಾರಣಗಳಾಗಿವೆ.
ಇಂದಿನ ದಿನಗಳಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಶ್ವಾಸಕೋಶ ಕ್ಯಾನ್ಸರ್ ಹೆಚ್ಚು ಕಂಡುಬರುತ್ತಿವೆ. ಆದರೆ ಸಂತಸದ ವಿಷಯವೆಂದರೆ, ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಚಿಕಿತ್ಸೆ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೇಮಾ ಮೇಟಿ ಮಾತನಾಡಿ, ನಿಯಮಿತ ಆರೋಗ್ಯ ತಪಾಸಣೆ, ಸ್ವಯಂ ಪರೀಕ್ಷೆ, ವೈದ್ಯರ ಸಲಹೆ ಮತ್ತು ಆರೋಗ್ಯಕರ ಜೀವನಶೈಲಿಯು ಅತ್ಯಂತ ಅಗತ್ಯ. ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು, ಸಮತೋಲಿತ ಆಹಾರ ಸೇವಿಸುವುದು, ದಿನನಿತ್ಯ ವ್ಯಾಯಾಮ ಮಾಡುವುದು ಮತ್ತು ಧನಾತ್ಮಕ ಮನೋಭಾವ ಇವುಗಳು ಕ್ಯಾನ್ಸರ್ ತಡೆಯಲು ಸಹಾಯಕವಾಗುತ್ತವೆ ಎಂದು ನುಡಿದರು.
ಉಪಾಧ್ಯಕ್ಷರಾದ ಕಸ್ತೂರಿ ಹಿರೇಗೌಡರ ಮಾತನಾಡಿ, ಕ್ಯಾನ್ಸರ್ ರೋಗಿಗಳ ಬಗ್ಗೆ ಸಹಾನುಭೂತಿ ಮತ್ತು ಬೆಂಬಲ ತೋರಿಸುವುದು ನಮ್ಮ ಸಾಮಾಜಿಕ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಸರೋಜಾ ಪೈಲ್ ನಿರ್ವಹಿಸಿದರು. ಭಾಗ್ಯ ಶಿರೋಳ ವಂದಿಸಿದರು. ಕಾರ್ಯಕ್ರಮದಲ್ಲಿ ನೀಲಾ ಮುದರಡ್ಡಿ, ಸುಮಂಗಲ ರಡ್ಡರ್, ಗಿರಿಜಾ ಸುರೇಬಾನ್, ದೊಡ್ಡಮನಿ, ರಾಜೇಶ್ವರಿ ಶಿರೋಳ, ಸುಮಂಗಲ ಪಾಟೀಲ್ ಮುಂತಾದವರಿದ್ದರು.



