ಬೆಂಗಳೂರು:- ಬೆಂಗಳೂರಿನ ಯಶವಂತಪುರದಲ್ಲಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೇ ಓರ್ವ ಸಾವನ್ನಪ್ಪಿದ ಘಟನೆ ಜರುಗಿದೆ. ಶಬರೀಶ್(29) ಮೃತ ದುರ್ದೈವಿ.
ಬೆಂಗಳೂರಿನಲ್ಲಿ ಇಂದು ಮುಂಜಾನೆ ಸುಮಾರು 3.45ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಯಶವಂತಪುರ ಸರ್ಕಲ್ನಲ್ಲಿ ಕಾರು ಬೈಕ್ಗೆ ಡಿಕ್ಕಿ ಹೊಡೆದು ಡಿವೈಡರ್ಗೆ ಡಿಕ್ಕಿಯಾಗಿ ಮೇಲ್ಸೇತುವೆಯಿಂದ ಬಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದರು.
ಇದೀಗ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತ ಶಬರೀಶ್ ತಮಿಳುನಾಡಿನ ಸೇಲಂ ಮೂಲದ ನಿವಾಸಿ. ಈತ ವೀಸಾ ಪಡೆಯಲು ನಿನ್ನೆ ಸ್ನೇಹಿತ ಮಿಥುನ್ ಜೊತೆ ಬೆಂಗಳೂರಿಗೆ ಬಂದಿದ್ದ. ಇದೇ ವೇಳೆ ಬೆಂಗಳೂರಲ್ಲಿ ವಾಸವಿದ್ದ ಶಂಕರ್ ಮತ್ತು ಆತನ ಸೋದರಿ ಅನುಶ್ರೀ ಇಬ್ಬರನ್ನೂ ಭೇಟಿ ಮಾಡಿದ್ದ. ನಾಲ್ವರು ಸ್ನೇಹಿತರು ಸೇರಿಕೊಂಡು ಊಟಕ್ಕೆಂದು ಕಾರಿನಲ್ಲಿ ತುಮಕೂರು ರಸ್ತೆ ಕಡೆ ಬರುತ್ತಿದ್ದ ವೇಳೆ ಯಶವಂತಪುರ ಸರ್ಕಲ್ ಫ್ಲೈಓವರ್ ಮೇಲೆ ಕಾರು ಅಪಘಾತವಾಗಿದೆ.
ಉಳಿದ ಶಂಕರ್ ರಾಮ್ (29), ಅನುಶ್ರೀ(23), ಮಿಥುನ್ (28) ಹಾಗೂ ಬೈಕ್ ನಲ್ಲಿದ್ದ ವ್ಯಕ್ತಿ ಮಂಜುನಾಥ್ (38)ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.