ಕೋಲಾರ:-ಈ ಕುಡುಕರಿಗೆ ಕುಡಿದ ಮತ್ತಿನಲ್ಲಿ ತಾವು ಏನು ಮಾಡುತ್ತಿದ್ದೇವೆ ಎಂಬ ಬಗ್ಗೆ ಅವರಿಗೆ ಅರಿವು ಕೂಡಾ ಇರಲ್ಲ. ಹೀಗೆ ಕೆಲವೊಬ್ಬರು ಕಂಠಪೂರ್ತಿ ಕುಡಿದು ಸಿಕ್ಕಸಿಕ್ಕವರ ಮೇಲೆ ಕೈ ಮಾಡಿಯೋ ಅಥವಾ ಬೈದು, ತಮ್ಮ ಜೀವಕ್ಕೆಯೇ ಆಪತ್ತು ತಂದು ಒಂದಷ್ಟು ಅವಾಂತರಗಳನ್ನು ಸೃಷ್ಟಿ ಮಾಡುತ್ತಿರುತ್ತಾರೆ. ಕುಡುಕ ಮಹಾಶಯರ ಇಂತಹ ಎಡವಟ್ಟುಗಳ ಸುದ್ದಿ ಈ ಹಿಂದೆಯೂ ವೈರಲ್ ಆಗಿದ್ದವು.
ಇದೀಗ ಅಂತದ್ದೇ ಘಟನೆ ಜರುಗಿದೆ. ಇಲ್ಲೋರ್ವ ಭೂಪ ಎಣ್ಣೆ ಏಟಲ್ಲಿ ರೈಲ್ವೆ ನಿಲ್ದಾಣದೊಳಕ್ಕೆ ಕಾರು ನುಗ್ಗಿಸಿರುವ ಘಟನೆ ಕೋಲಾರದಲ್ಲಿ ತಡರಾತ್ರಿ ಜರುಗಿದೆ.
ಜಿಲ್ಲೆಯ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರೈಲ್ವೆ ಪ್ಲಾಟ್ಫಾರ್ಮ್ ಮೇಲಿಂದ ರೈಲ್ವೆ ಹಳಿಗಳ ಮೇಲೆ ಅಪ್ಪಳಿಸಿದೆ. ಪರಿಣಾಮವಾಗಿ ಕಾರು ಮತ್ತು ರೈಲ್ವೆ ಹಳಿಗೆ ಡ್ಯಾಮೇಜ್ ಆಗಿದೆ.
ಕಾರು ಮಾಲೀಕ ರಾಕೇಶ್ ಎಂಬಾತ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಈ ಅವಾಂತರ ಸೃಷ್ಟಿಸಿದ್ದಾನೆ. ರೈಲ್ವೆ ಪೊಲೀಸರು ಜೆಸಿಬಿ ಸಹಾಯದಿಂದ ಕಾರು ತೆರವುಗೊಳಿಸಿದ್ದಾರೆ. ಬಂಗಾರಪೇಟೆ ರೈಲ್ವೆ ಪೊಲೀಸರು ಕಾರು ಮಾಲೀಕ ರಾಕೇಶ್ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.