ವಿಜಯಸಾಕ್ಷಿ ಸುದ್ದಿ, ಗದಗ:- ಬೆಳೆ ಮಾರಾಟ ಮಾಡಿ ಬಂದಿದ್ದ ಹಣದೊಂದಿಗೆ ಮರಳಿ ಊರಿಗೆ ಹೊರಟಾಗ ರೈತನ ಜೇಬು ಕತ್ತರಿಸಿ ಹಣ ಲೂಟಿ ಮಾಡಿದ್ದ ಇಬ್ಬರು ಕಳ್ಳರನ್ನು ಹೆಡಮುರಿ ಕಟ್ಟುವಲ್ಲಿ ಬೆಟಗೇರಿ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಹುಬ್ಬಳ್ಳಿಯ ದುರ್ಗಾದೇವಿ ಗುಡಿ ಹತ್ತಿರದ ಸೆಟ್ಲಮೆಂಟ್ ನಿವಾಸಿ ಅಮಿತ್ ತಂದೆ ಮಧುಕರ್ ಗುಂಜಾಳ ಹಾಗೂ ಗದಗನ ಬೆಟಗೇರಿಯ ಮಂಜುನಾಥ್ ನಗರದ ನಿವಾಸಿ ಆಟೋ ಚಾಲಕ ಚಂದ್ರ ಅಲಿಯಾಸ್ ಚಂದ್ರಪ್ಪ ಅಪ್ಪಣ್ಣ ಕಟ್ಟಿಮನಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 50ಸಾವಿರ ಹಣ ಜಪ್ತಿ ಮಾಡಲಾಗಿದೆ.
ಆಗಸ್ಟ್ 6 ರೋಣ ತಾಲೂಕಿನ ಮಾರನಬಸರಿ ಗ್ರಾಮದ ಮಲ್ಲಿಕಾರ್ಜುನಗೌಡ ಪಾಟೀಲ ಎಂಬ ರೈತ ಎಪಿಎಮ್ಸಿಯಲ್ಲಿ ತಾನು ತಂದಿದ್ದ ಹೆಸರು ಕಾಳು ಮಾರಾಟ ಮಾಡಿ ಬಂದಿದ್ದ ಹಣದೊಂದಿಗೆ ಮರಳಿ ತನ್ನೂರಿಗೆ ಹೋಗಲು ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದ. ರೈತನ ಬಳಿ ಹಣ ಇರುವುದನ್ನು ಗಮನಿಸಿದ ಕಳ್ಳರು, ರೈತ ಬಸ್ ಹತ್ತುವಾಗ ಬ್ಲೇಡ್ನಿಂದ ರೈತನ ಪ್ಯಾಂಟಿನ ಜೇಬು ಕತ್ತರಿಸಿ 94 ಸಾವಿರ ರೂ. ಹಣವನ್ನು ಎಗರಿಸಿದ್ದರು.
ಆ ನಂತರ ಹಣ ಕಳೆದುಕೊಂಡು ರೈತ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. 63/2024 ಕಲಂ 303(2) ಬಿ ಎನ್ ಎಸ್-2023ರಂತೆ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣ ಭೇದಿಸಲು ಎಸ್ಪಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಎಸ್ಪಿ ಬೆಟಗೇರಿ ಸಿಪಿಐ ಎಮ್ ಬಿ ಸಂಕದ, ಡಿವೈಎಸ್ಪಿ ಜೆ.ಎಚ್ ಇನಾಮದಾರ ಮಾರ್ಗದರ್ಶನದಲ್ಲಿ ಬೆಟಗೇರಿ ಠಾಣಾ ಸಿಪಿಐ ಧೀರಜ್ ಸಿಂಧೆ, ಬಡಾವಣೆ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆಯ ಪಿಎಸ್ಐ ಮಾರುತಿ ಜೋಗದಂಡಕರ್, ಅಪರಾಧ ವಿಭಾಗದ ಬಿ.ಟಿ ರಿತ್ತಿ ಹಾಗೂ ಸಿಬ್ಬಂದಿಗಳಾದ ಪಿ. ಎಚ್ ದೊಡಮನಿ, ಅಶೋಕ ಗದಗ, ನಾಗರಾಜ್ ಬರಡಿ, ಎನ್.ಡಿ ಹುಬ್ಬಳ್ಳಿ, ಮಹೇಶ್ ಹೂಗಾರ, ಎಸ್.ಎಚ್. ಕಮತರ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನವಾದ ಹಣವನ್ನು ಹಾಗೂ ಪ್ರಕರಣ ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಬಿ.ಎಸ್ ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



