ಮದುವೆಗೆ ಒತ್ತಾಯಿಸಿದ್ದ ಪ್ರೇಯಸಿ ಕೊಂದು ಹೂತು ಹಾಕಿದ್ದ ಕೇಸ್: ಯುವತಿ ಬುರುಡೆಗಾಗಿ ಪೊಲೀಸರ ಶೋಧ!

0
Spread the love

ಗದಗ:- ಮದುವೆಗೆ ಒತ್ತಾಯಿಸಿದ್ದ ಪ್ರೇಯಸಿಯನ್ನು ಕೊಂದು ಆಕೆಯ ಅಂಗಾಂಗಗಳನ್ನು ಬೇರೆ-ಬೇರೆ ಕಡೆ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಿಯಕರ ಪೊಲೀಸರ ತನಿಖೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ.

Advertisement

ಕಳೆದ 2024 ಡಿಸೆಂಬರ್ 16ರಂದು ಗದಗ ಜಿಲ್ಲೆಯಲ್ಲಿ ನಡೆದಿದ್ದ ಯುವತಿಯ ಭೀಕರ ಕೊಲೆ ಪ್ರಕರಣದ ತನಿಖೆಯನ್ನು ಗದಗ ಬಡಾವಣೆ ಪೊಲೀಸ್ ಠಾಣೆಯ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ ಚುರುಕುಗೊಳಿಸಿದ್ದು, ಆದರೆ ಎಷ್ಟೇ ಶೋಧ ನಡೆಸಿದರೂ ಯುವತಿ ತಲೆ ಬುರುಡೆ ಇದುವರೆಗೂ ಪತ್ತೆಯಾಗಿಲ್ಲ. ಘಟನೆ ಸಂಬಂಧ ಯುವತಿ ತಲೆ ಬುರುಡೆ ಶೋಧ ಕಾರ್ಯ ಮುಕ್ತಾಯವಾಗಿದ್ದು, ಪೊಲೀಸರಿಗೆ ಕೊಲೆ ಹಂತಕ ಚಳ್ಳೆ ಹಣ್ಣು ತಿನ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗದಗ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಹಂತಕ ತೋರಿಸಿದ ಎರಡು ಜಾಗದಲ್ಲಿ ಅಗೆದ್ರೂ ಯುವತಿ ತಲೆ ಬುರುಡೆ ಸಿಕ್ಕಿಲ್ಲ. ಇಲ್ಲಿ-ಅಲ್ಲಿ ಅಂತ ಎಸಿ ಗಂಗಪ್ಪ, ಬೆಟಗೇರಿ ಸಿಪಿಐ ಧೀರಜ್ ಶಿಂಧೆ, ಪಿಎಸ್ ಐ ಮಾರುತಿ ಜೋಗದಂಡಕರ, ವೈದ್ಯಕೀಯ ತಂಡ ಹಾಗೂ ಎಫ್ಎಸ್ಎಲ್ ತಂಡಗಳಿಗೆ ಹಂತಕ ಅಲೆದಾಡಿಸಿದ್ದಾನೆ.

ಹಳ್ಳ ಹಾಗೂ ಜಮೀನಿನಲ್ಲಿ ಬುರುಡೆಗಾಗಿ ಅಗೆದು ಅಧಿಕಾರಿಗಳು ಹೈರಾಣಾಗಿದ್ದಾರೆ. ಒಂದು ಕಡೆ ಯುವತಿ ಚಪ್ಪಲಿ, ಕೂದಲು, ಬಟ್ಟೆ ಪತ್ತೆಯಾದ್ರೆ, ಇನ್ನೊಂದು ಕಡೆ ಯಾವುದೇ ವಸ್ತು ಪತ್ತೆಯಾಗಿಲ್ಲ.. ಆರಂಭದಿಂದಲೂ ಹಂತಕ ಪೊಲೀಸರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ. ಕೊಲೆ ಮಾಡಿದಾಗಲೂ ದೃಶ್ಯ ಸಿನಿಮೀಯಾ ಮಾದರಿಯಲ್ಲಿ ಆರೋಪಿ ಸಾಕ್ಷ್ಯ ನಾಶ ಮಾಡ್ತಾಯಿದ್ದ. ಈಗ ಮತ್ತೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾನೆ. ಹೀಗಾಗಿ ಯುವತಿ ಬುರುಡೆ ಪತ್ತೆಹಚ್ಚಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.

ಘಟನೆ ವಿವರ:

ಗದಗದಲ್ಲಿ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಕೊಲೆ ಪ್ರಕರಣವನ್ನು ಗದಗ ಬಡಾವಣೆ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯನ್ನು ಆಕೆಯ ಪ್ರಿಯಕರನೇ ಹತ್ಯೆ ಮಾಡಿ ತನ್ನ ಜಮೀನಿನಲ್ಲೇ ಹೂತು ಹಾಕಿದ್ದು, ಪ್ರಕರಣ ಸಂಬಂಧ ಗದಗ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ನಾರಾಯಣಪುರ ಗ್ರಾಮದ ನಿವಾಸಿಗಳಾದ ಸತೀಶ್ ಹಿರೇಮಠ ಮತ್ತು ಮಧುಶ್ರೀ ಅಂಗಡಿ ಇಬ್ಬರೂ  ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಕುಟುಂಬಗಳು ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಸತೀಶ್ ನಿಂದ ಮಧುಳನ್ನು ದೂರ ಮಾಡುವ ಪ್ರಯತ್ನದಲ್ಲಿ ಯುವತಿಯ ಕುಟುಂಬ ಮಧುಳನ್ನು ಚಿಕ್ಕಪ್ಪನ ಮನೆಗೆ ಕಳುಹಿಸಿದ್ದರು. ಅದಾಗ್ಯೂ ಸತೀಶ್ ಬೈಕ್ ನಲ್ಲಿ ಅಲ್ಲಿಗೆ ಹೋಗಿ ಮಧುಳನ್ನು ಭೇಟಿ ಮಾಡಿದ್ದು, ಅಲ್ಲಿಂದ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.

ಬಳಿಕ ಇಬ್ಬರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ವೇಲ್‌ನಿಂದ ಮಧು ಅವರ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ನಂತರ ಮೃತದೇಹವನ್ನು ತನ್ನ ಜಮೀನಿನಲ್ಲೇ ಹೂತುಹಾಕಿದ್ದ. ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇದುವರೆಗೂ ಯುವತಿಯ ಬುರುಡೆ ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಬುರುಡೆ ಪತ್ತೆ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here