ಗದಗ ಪೊಲೀಸರ ಕಾರ್ಯಾಚರಣೆ: ಮೋಸ, ವಂಚನೆ, ಕಳ್ಳತನ ಪ್ರಕರಣಗಳ ಪತ್ತೆ! 42ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಆಗಸ್ಟ್ 1, 2024ರಿಂದ ಜುಲೈ 31, 2025ರವರೆಗೆ ಗದಗ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಪತ್ತೆ ಮಾಡಲಾದ ಸ್ವತ್ತಿನ ಅಪರಾಧ ಪ್ರಕರಣಗಳು, ಮೋಸ, ವಂಚನೆ, ಕಳ್ಳತನ ಹಾಗೂ ಇತರೆ ಪ್ರಕರಣಗಳಲ್ಲಿನ ನಗದು ಹಣವನ್ನು ಮೂಲ ವಾರಸುದಾರರಿಗೆ ಸಂಬಾಪುರ ರಸ್ತೆಯಲ್ಲಿರುವ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಒಟ್ಟು 55 ಕಳ್ಳತನ ಪ್ರಕರಣಗಳನ್ನು ದಾಖಲಿಸಿಕೊಂಡು, 27 ಪ್ರಕರಣವನ್ನು ಪತ್ತೆ ಹಚ್ಚಿ 33 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 42 ಲಕ್ಷಕ್ಕೂ ಅಧಿಕ ಮೊತ್ತದ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ. ಸುಮಾರು 5 ಲಕ್ಷಕ್ಕೂ ಅಧಿಕ ಮೊತ್ತದ ಬೆಳ್ಳಿಯ ಆಭರಣಗಳನ್ನು ಪತ್ತೆಹಚ್ಚಲಾಗಿದೆ. 16 ಲಕ್ಷ ರೂ.ಗಳಿಗೂ ಅಧಿಕ ನಗದು ಕಳ್ಳತನ ಪ್ರಕರಣದಲ್ಲಿ 2,74,900 ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

49 ವಾಹನ ಕಳ್ಳತನ ಪ್ರಕರಣ ದಾಖಲಿಸಿಕೊಂಡು 25 ವಾಹನಗಳನ್ನು ಪತ್ತೆ ಹಚ್ಚಿ 35 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮೋಸ, ವಂಚನೆಯ 21 ಪ್ರಕರಣ ದಾಖಲಿಸಿಕೊಂಡು 9 ಪ್ರಕರಣಗಳನ್ನು ಪತ್ತೆ ಹಚ್ಚಿ 27 ಆರೋಪಿಗಳನ್ನು ಬಂಧಿಸಿ 13,90,345 ರೂ ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ 1,137 ಮೊಬೈಲ್ ಕಳ್ಳತನ ಪ್ರಕರಣ ದಾಖಲಿಸಿಕೊಂಡು 41,55,000 ರೂ ಮೊತ್ತದ 277 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಒಂದು ವರ್ಷದಿಂದ ಕಳ್ಳತನ, ಸುಲಿಗೆ, ವಂಚನೆ ಪ್ರಕರಣಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಪತ್ತೆ ಹಚ್ಚಿದ್ದೇವೆ. ಪತ್ತೆ ಕಾರ್ಯಕ್ಕೆ ಸಾಕಷ್ಟು ಶ್ರಮ ವಹಿಸಲಾಗಿದೆ. ದಾಖಲಾದ ಒಟ್ಟೂ ಪ್ರಕರಣಗಳಲ್ಲಿ ಶೇ. 70ರಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಸುಲಿಗೆ ಪ್ರಕರಣಗಳನ್ನು ಶೇ. 80ರಷ್ಟು ಪತ್ತೆ ಹಚ್ಚಲಾಗಿದೆ. ಪೊಲೀಸ್ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಬಡವರು ಜೀವನ ಪರ್ಯಂತ ದುಡಿದು ಸಂಪಾದಿಸಿದ ಆಭರಣಗಳನ್ನು ಕಿಡಿಗೇಡಿಗಳು ಕದ್ದಿರುತ್ತಾರೆ. ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಪೊಲೀಸರು ಹಗಲು-ರಾತ್ರಿ ಶ್ರಮಿಸಿದ್ದಾರೆ. ಆರೋಪಿಗಳು ಎಲ್ಲಿಗೆ ಹೋಗುತ್ತಾರೆ, ಯಾರ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಿ ಹೊರ ರಾಜ್ಯಗಳಿಂದ ಆರೋಪಿಗಳನ್ನು ಬಂಧಿಸಿ ತರಲಾಗಿದೆ. ಜೊತೆಗೆ ಬೇರೆ ಜಿಲ್ಲೆಯಲ್ಲಿ ಕಳ್ಳತನವಾದ ವಾಹನಗಳನ್ನೂ ವಶಪಡಿಸಿಕೊಂಡಿದ್ದೇವೆ.

– ರೋಹನ್ ಜಗದೀಶ್.

ಜಿಲ್ಲಾ ಪೊಲೀಸ್ ಅಧೀಕ್ಷಕರು.


Spread the love

LEAVE A REPLY

Please enter your comment!
Please enter your name here