ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜುಲೈ 6ರಂದು ಆಚರಿಸಲಾಗುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕೆಂದು ರೋಣ ಸಿಪಿಐ ಎಸ್.ಎಸ್. ಬೀಳಗಿ ಹೇಳಿದರು.
ನರೇಗಲ್ಲ ಪೊಲೀಸ್ ಠಾಣೆಯಲ್ಲಿ ನಡೆದ ಮೊಹರಂ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನರೇಗಲ್ಲ ಪಟ್ಟಣ ಮತ್ತು ಹೋಬಳಿ ಎಂದಿಗೂ ಶಾಂತಿಪ್ರಿಯತೆಗೆ ಹೆಸರಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ ಬಾಂಧವರೆಲ್ಲರೂ ಸೋದರ ಭಾವನೆಯಿಂದ ಬಾಳುತ್ತಿದ್ದು, ಎಲ್ಲರೂ ಸೇರಿ ಹಬ್ಬಗಳನ್ನು ಮಾಡುತ್ತಿರುವುದನ್ನು ಕಂಡು ಆನಂದವಾಗಿದೆ. ಆದ್ದರಿಂದ ಮುಂಬರುವ ಹಬ್ಬವನ್ನು ನೀವೆಲ್ಲರೂ ಸೇರಿ ಬಹಳಷ್ಟು ಸಡಗರ ಸಂಭ್ರಮಗಳಿಂದ ಆಚರಿಸಿರಿ. ಏನಾದರೂ ಅಹಿತಕರ ಘಟನೆಗಳು ಜರುಗಲಿವೆ ಎಂಬ ಸುಳಿವು ನಿಮಗೆ ಸಿಕ್ಕಲ್ಲಿ ನಿಮ್ಮ ಮಟ್ಟದಲ್ಲಿ ನೀವೇ ಬಗೆಹರಿಸಲು ಪ್ರಯತ್ನಿಸಿ, ನಿಮ್ಮ ಕೈಮೀರುವಂತೆ ಕಂಡರೆ ತಕ್ಷಣ ಪೊಲೀಸ್ ಠಾಣೆಗೆ ತಿಳಿಸಿ. ಇದರಿಂದ ಘಟನೆ ನಡೆಯುವ ಪೂರ್ವದಲ್ಲಿಯೆ ತಡೆಯಬಹುದು ಎಂದರು.
ಠಾಣಾಧಿಕಾರಿ ಐಶ್ವರ್ಯ ನಾಗರಾಳ ಮಾತನಾಡಿ, ಪ್ರತಿ ಹಬ್ಬದ ಸಂದರ್ಭದಲ್ಲಿಯೂ ಇಲ್ಲಿನ ಹಿರಿಯರು ನೀಡುತ್ತಿರುವ ಸಹಕಾರ ಅಮೋಘವಾಗಿದೆ. ಎಲ್ಲರೂ ಒಮ್ಮನದಿಂದ ಹಬ್ಬಗಳನ್ನು ಆಚರಿಸುವುದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಇಲ್ಲಿ ಅವಕಾಶ ಇಲ್ಲದಿರುವುದು ನಮ್ಮೆಲ್ಲರ ಸೌಭಾಗ್ಯ. ಇದನ್ನು ಎಲ್ಲರೂ ಹೀಗೇ ಮುನ್ನಡೆಸಿಕೊಂಡು ಹೋಗೋಣ ಎಂದರು.
ಸಭೆಯನ್ನುದ್ದೇಶಿಸಿ ನಿವೃತ್ತ ಶಿಕ್ಷಕ ಎ.ಎ. ನವಲಗುಂದ, ಎಂ.ಎಸ್. ದಢೇಸೂರಮಠ, ಚಂದ್ರು ರಾಠೋಡ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಜಿ.ಎಂ. ನದಾಫ್, ಎಚ್.ಆರ್. ಕೊಪ್ಪಳ, ಕೆ.ಎಚ್. ಅಣ್ಣಿಗೇರಿ, ಖಾದರಭಾಷಾ ಹೂಲಗೇರಿ, ಮೌಲಾಸಾಬ ಬೆಟಗೇರಿ, ರಮೇಶ, ಕೆ.ಎಸ್. ಗಡಾದ, ನಾಗರಾಜ ವಡ್ಡರ, ಎಚ್.ಐ. ದೊಡ್ಡಮನಿ, ಸಿರಾಜ ಹೊಸಮನಿ, ಎಂ.ಬಿ. ಪರಶು, ಮುತ್ತು ಮುದಗಲ್ಲ, ಸಿದ್ದಿಕ್ ದಳವಾಯಿ, ದಾದೇಸಾಬ ಹೊಸಮನಿ, ಎ.ಕೆ. ತಿರ್ಲಾಪೂರ, ರಸೂಲಸಾಬ ಜಕ್ಕಲಿ, ಆರ್.ಆರ್. ಹೊಸಮನಿ, ಠಾಣಾ ಸಿಬ್ಬಂದಿಗಳು ಇದ್ದರು.