ವಿಜಯಸಾಕ್ಷಿ ಸುದ್ದಿ, ಗದಗ : ಗದುಗಿನ ಅಡವೀಂದ್ರ ಸ್ವಾಮಿ ಮಠದಲ್ಲಿ ದಸರಾ ಮಹೋತ್ಸವದ 44ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಹಾಗೂ 10ನೇ ವರ್ಷದ ಅನ್ನಪೂರ್ಣೆಶ್ವರಿ ದೇವಿಯ ಮಹಾರಥೋತ್ಸವದ ಅಂಗವಾಗಿ ರವಿವಾರ ಮುಂಜಾನೆ ಕುಂಭೋತ್ಸವ ಜರುಗಿತು.
ಗದಗ ಒಕ್ಕಲಗೇರಿಯ ಶ್ರೀ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಿಂದ ಮಹಿಳೆಯರು ಕೈಗೊಂಡ ಕುಂಭೋತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಡವೀಂದ್ರ ಸ್ವಾಮಿ ಮಠಕ್ಕೆ ಆಗಮಿಸಿತು.
ನಂತರ ಅನ್ನಪೂರ್ಣೆಶ್ವರಿ ದೇವರಿಗೆ ಹಾಗೂ ಕರ್ತೃ ಗದ್ದುಗೆಗೆ ಕುಂಬಾಭಿಷೇಕ ಹಾಗೂ ರುದ್ರಪಠಣವು ಪೂಜಾ ಸಮಿತಿಯ ವೈದಿಕ ವೃಂದದಿಂದ ಜರುಗಿತು. ಶ್ರೀಮಠದ ಸಂಸ್ಥಾಪಕರಾದ ಅಡವೀಂದ್ರಸ್ವಾಮಿಗಳು, ಷಣ್ಮುಖ ಸ್ವಾಮಿಗಳು, ವಿರೂಪಾಕ್ಷ ಸ್ವಾಮಿಗಳು, ಶರಣಯ್ಯ ಸ್ವಾಮಿಗಳವರ ಪುಣ್ಮಸ್ಮರಣೋತ್ಸವವು ಜರುಗಿತು.
ಶ್ರೀಮಠದ ಧರ್ಮದರ್ಶಿ ಪೂಜ್ಯ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಅವರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಲ್ಲೇದ, ಜಾತ್ರಾ ಮಹೋತ್ಸವದ ಮಹಿಳಾ ಸಮಿತಿಯ ಅಧ್ಯಕ್ಷೆ ಲೀಲಾವತಿ ಬಿಳೇಯಲಿ ಉಪಸ್ಥಿತಿಯಲ್ಲಿ ಜರುಗಿದ ಕಾರ್ಯಕ್ರಮಗಳಲ್ಲಿ ಎಲ್ಲ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.