ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಕೇಂದ್ರದ ಬಿಜೆಪಿ ಸರ್ಕಾರ ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದ್ದು, ದೆಹಲಿಯ ಇಂದ್ರಲೋಕ ಪ್ರದೇಶದಲ್ಲಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ಸಮುದಾಯದವರ ಮೇಲೆ ಕಾರಣವಿಲ್ಲದೆ ಏಕಾಏಕಿ ದರೋಡೆಕೋರರಂತೆ ದಬ್ಬಾಳಿಕೆ ನಡೆಸಿರುವುದು ಪ್ರಜಾಪ್ರಭುತ್ವಕ್ಕೆ ಮಸಿ ಬಳಿದಂತೆ ಎಂದು ಸಿಪಿಐಎಂಎಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೇರ ಪರಶುರಾಮ ಆರೋಪಿಸಿದರು.
ಹರಪನಹಳ್ಳಿ ಪಟ್ಟಣದ ಐಬಿ ವೃತ್ತದಲ್ಲಿ ಮುಸ್ಲಿಂ ಸಮುದಾಯದವರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆಯಲ್ಲಿ ಮಾತನಾಡಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನಾವಶ್ಯಕವಾಗಿ ದಬ್ಬಾಳಿಕೆ ನಡೆಸಿ, ಕಾಲಿನಿಂದ ಒದ್ದು ಅಮಾನವೀಯ ನಡವಳಿಕೆ ತೋರಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರವಿದ್ದು ದೇಶದಲ್ಲಿ ದಲಿತ, ದಮನಿತ ಅಲ್ಪಸಂಖ್ಯಾತರ ಮೇಲೆ ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದ ದೌರ್ಜನ್ಯ ಎಸಗುತ್ತಿದೆ. ಧರ್ಮ ಧರ್ಮಗಳ ಮಧ್ಯೆ ಇರುವ ಸಹೋದರತ್ವ ಮನೋಭಾವನೆಯನ್ನು ಕಲಕುವ ಕೆಲಸವನ್ನು ಮಾಡುತ್ತಾ ರಾಜಕೀಯ ಮಾಡುತ್ತಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದ್ರೋಹವಾಗಿದೆ ಎಂದರು.
ಸಂತೋಷ ಗುಳೆದಟ್ಟಿ, ಬಾಲಗಂಗಾಧರ, ಪಿ. ದುರುಗಪ್ಪ, ಹೆಚ್. ಪರುಸಪ್ಪ, ಹೆಚ್.ಬಿ. ಹಾಲಯ್ಯ, ಮಲ್ಲಿಕಾರ್ಜುನ, ಕೊಟ್ರೇಶ, ತಿಮ್ಮಪ್ಪ ಇತರರಿದ್ದರು.