ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವರಮಹಾಲಕ್ಷ್ಮೀ ಹಬ್ಬದ ದಿನವೇ ಸಂಜೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಳ್ಳರು ಮಹಿಳೆಯರ ಮಾಂಗಲ್ಯ ಸರ ದೋಚಿ ಪರಾರಿಯಾದ ಘಟನೆ ಜರುಗಿದೆ.
ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಮತ್ತು ಪಟ್ಟಣದ ಸಂತೆ ದಿನವಾದ್ದರಿಂದ ಸಂಜೆ ವೇಳೆ ಪಟ್ಟಣದ ಬಸ್ ನಿಲ್ದಾಣ ಜನದಟ್ಟಣೆಯಿಂದ ಕೂಡಿತ್ತು. ಈ ವೇಳೆ ಹೊಸರಿತ್ತಿ ಮಾರ್ಗದ ಬಸ್ನಲ್ಲಿ ಹತ್ತುವ ವೇಳೆ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ. ಸಿದ್ದಾಪುರ ಗ್ರಾಮದ ಮಹಿಳೆಯರಾದ ನೇತ್ರಾವತಿ ಮಠದ, ರತ್ನವ್ವ ಕುರಿ ಹಾಗೂ ಶಿಗ್ಲಿ ಗ್ರಾಮದ ಗರ್ಭಿಣಿ ಮಹಿಳೆ ಸೌಮ್ಯ ಮಾದನಹಳ್ಳಿ ಸೇರಿ ನಾಲ್ಕು ಜನ ಮಹಿಳೆಯರ ಸರ ಕತ್ತರಿಸಿದ್ದಾರೆ. ಇಷ್ಟಾದರೂ ಕಳ್ಳತನ ಯಾರ ಗಮಗಕ್ಕೂ ಬರಲಿಲ್ಲ.
ಬಸ್ಸು ಪೊಲೀಸ್ ಠಾಣೆ ಹತ್ತಿರ ಹಾದು ಹೋಗುವಾಗ ಓರ್ವ ಮಹಿಳೆಗೆ ಗೊತ್ತಾಗಿ ಕಿರುಚಾಡಿದ್ದಾಳೆ. ಆಗಲೇ ಎಲ್ಲರೂ ತಮ್ಮ ಕೊರಳನ್ನು ನೋಡಿಕೊಂಡಿದ್ದಾರೆ. ಚಾಲಕ ಬಸ್ ನಿಲ್ಲಿಸಿದಾಗ ಸರ ಕಳೆದುಕೊಂಡ ಮಹಿಳೆಯರು ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಸ್ಸಿನಲ್ಲಿಯೇ ಮಾಂಗಲ್ಯ ಸರದ ಒಂದಷ್ಟು ಗುಂಡುಗಳು ಸಿಕ್ಕಿವೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರವಷ್ಟೇ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆಯ ಸಂದೇಶ ತಲುಪಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಲಕ್ಷ್ಮೇಶ್ವರದ ಬಸ್ ನಿಲ್ದಾಣದಲ್ಲಿ ಇಂತಹ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಬೇಕು ಮತ್ತು ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.