ಬ್ರಾಹ್ಮಣ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಇದೀಗ ಚಾಣಕ್ಯ ಸೇನಾ ಅನುರಾಗ್ ಕಶ್ಯಪ್ ಮುಖಕ್ಕೆ ಕಪ್ಪು ಬಣ್ಣ ಬಳಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಅನುರಾಗ್ ಹೇಳಿಕೆ ವಿರುದ್ಧ ಹಲವಾರು ಬ್ರಾಹ್ಮಣ ಸಂಘಟನೆಗಳು ಆನ್ಲೈನ್ ಸಭೆ ನಡೆಸಿದವು. ಸಭೆಯಲ್ಲಿ ಚಾಣಕ್ಯ ಸೇನೆ, ಅಖಿಲ ಬ್ರಾಹ್ಮಣ ಮಹಾಸಭಾ, ಬ್ರಾಹ್ಮಣ ಸೇವಾ ಸಂಘ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ, ವಿಶ್ವ ಬ್ರಾಹ್ಮಣ ಪರಿಷತ್ ಮತ್ತು ಅಖೀರ್ ಭಾರತೀಯ ಬ್ರಾಹ್ಮಣ ಸಂಘ ಭಾಗಿಯಾಗಿದ್ದವು. ಸರ್ವ ಬ್ರಾಹ್ಮಣ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಚಾಣಕ್ಯ ಸೇನೆಯ ಮುಖ್ಯ ಪೋಷಕರಾದ ಪಂಡಿತ್ ಸುರೇಶ್ ಮಿಶ್ರಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
‘ಬ್ರಾಹ್ಮಣರ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜವನ್ನು ವಿಭಜಿಸುತ್ತಿರುವ ಅನುರಾಗ್ ಕಶ್ಯಪ್ ಅವರಂತಹ ಜನರಿಗೆ ಪಾಠ ಕಲಿಸಬೇಕಾಗಿದೆ. ಈ ದೇಶಕ್ಕಾಗಿ ಬ್ರಾಹ್ಮಣ ಸಮುದಾಯ ತ್ಯಾಗ ಮಾಡಿಲ್ಲವೇ? ಎಲ್ಲರ ಕಲ್ಯಾಣಕ್ಕಾಗಿ ಮಾತನಾಡುವ ಮತ್ತು ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಬ್ರಾಹ್ಮಣರ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ದುರದೃಷ್ಟಕರ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಪಾಠ ಕಲಿಸಬೇಕಾಗಿದೆ’ ಎಂದು ಮಿಶ್ರಾ ಅಸಮಾಧಾನ ವ್ಯಕ್ತಪಡಿಸಿದರು.
‘ಸಮಾಜದಲ್ಲಿ ಪರಸ್ಪರ ಗೌರವವನ್ನು ನಾಶಮಾಡಲು ಪ್ರಯತ್ನಿಸುತ್ತಿರುವ ಇಂತಹ ವಿನಾಶಕಾರಿ ಜನರನ್ನು ಬಲವಾಗಿ ವಿರೋಧಿಸಬೇಕು. ಸರ್ವಜನ ಹಿತಾಯ ಮತ್ತು ಸರ್ವಜನ ಸುಖಾಯ ಎಂಬ ಮನೋಭಾವದಿಂದ ಕೆಲಸ ಮಾಡುವ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡಿರುವ ಇಂತಹ ಜನರನ್ನು ಅವಮಾನಿಸಬೇಕು, ಇದರಿಂದ ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುವುದಿಲ್ಲ’ ಎಂದು ಮಿಶ್ರಾ ಹೇಳಿದರು.
ಜೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಜೀವನ ಆಧರಿಸಿದ ‘ಫುಲೆ’ ಸಿನಿಮಾಕ್ಕೆ ಬ್ರಾಹ್ಮಣ ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಈ ಕಾರಣದಿಂದ ಸೆನ್ಸಾರ್ ಮಂಡಳಿ ಸಿನಿಮಾಗೆ ವಿರೋಧ ಹೊರಹಾಕಿದೆ. ಅಲ್ಲದೆ, ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ. ಇದೇ ಕಾರಣಕ್ಕೆ ಅನುರಾಗ್ ಕಶ್ಯಪ್ ಸಿಟ್ಟಾಗಿದ್ದು ಸಿಬಿಎಫ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ, ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವಾಗ, ‘ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೇನೆ ಏನಿವಾಗ’ ಎಂದು ಅನುರಾಗ್ ಕಶ್ಯಪ್ ಹೇಳಿದ್ದರು. ಅನುರಾಗ್ ಹೇಳಿಕೆ ಬ್ರಾಹ್ಮಣರ ಆಕ್ರೋಶಕ್ಕೆ ಕಾರಣವಾಗಿದೆ.