ಮುಂಗಾರು ಮಳೆ ಪ್ರಾರಂಭಗೊಂಡಿದೆ. ಮಳೆಗಾಲದ ಸಮಯದಲ್ಲಿ ಹಲವಾರು ಕಾಯಿಲೆಗಳು ಮನುಷ್ಯರನ್ನು ಕಾಡುತ್ತವೆ. ಅವುಗಳಲ್ಲಿ ಶೀತ, ಕೆಮ್ಮು, ತಲೆನೋವು, ಜ್ವರ, ಮೈಕೈ ನೋವು ಸಹಜವಾಗ ಮಕ್ಕಳು, ವೃದ್ಧರು, ಮಹಿಳೆಯರು, ಪುರುಷರು ಸೇರಿ ಎಲ್ಲ ವಯೋಮಾನದವರನ್ನು ಭಾದಿಸುತ್ತವೆ. ಮಳೆಗಾಲದ ಸಮಯದಲ್ಲಿ ಬಂದು ಹೋಗುವ ಹಲವಾರು ಕಾಯಿಲೆಯ ಜೊತೆಗೆ ಮಲೇರಿಯಾ, ಡೆಂಗ್ಯೂ, ಚಿಕುನ್ ಗೂನ್ಯದಂತಹ ದೊಡ್ಡ ಪ್ರಮಾಣದ ಕಾಯಿಲೆಗಳು ಭಾದಿಸಲು ಶುರು ಮಾಡಿಕೊಂಡಿವೆ. ಇವುಗಳಿಂದ ರಕ್ಷಿಸಿಕೊಳ್ಳಲು ಹತ್ತು ಹಲವಾರು ಮುಂಜಾಗೃತಾ ಕಾರ್ಯಾಗಾರಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳುವುದು ಸಾರ್ವಜನಿಕರ ಜವಬ್ದಾರಿಯಾಗಿದೆ.
ಮಲೇರಿಯಾ ಎಂದರೆ ಸಾಂಕ್ರಾಮಿಕ ರೋಗವಲ್ಲ. ಅಂದರೆ ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಇದು ಸೋಂಕಿತ ಹೆಣ್ಣು ಅನಾಫಿಲಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುತ್ತದೆ. ಮಲೇರಿಯಾ ನಿಯಂತ್ರಣಕ್ಕೆ ಸೊಳ್ಳೆಗಳ ಕಾಟ ತಡೆಯುವುದು ಅತ್ಯಗತ್ಯ. ಸೊಳ್ಳೆ ನಿವಾರಕಗಳನ್ನು ಬಳಸುವುದು, ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವುದು ಮತ್ತು ಸೊಳ್ಳೆ ಪರದೆಗಳ ಅಡಿಯಲ್ಲಿ ಮಲಗುವುದು ಸುಲಭ ಉಪಾಯ. ಅಲ್ಲದೆ, ನಿಂತ ನೀರನ್ನು ತೆಗೆದುಹಾಕುವ ಮೂಲಕ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದು ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮಲೇರಿಯಾದ ಲಕ್ಷಣಗಳು ಸಾಮಾನ್ಯವಾಗಿ ಸೋಂಕಿನ ನಂತರ 10 ದಿನಗಳಿಂದ 4 ವಾರಗಳವರೆಗೆ ಬೆಳವಣಿಗೆಯಾಗುತ್ತವೆ. ಸೋಂಕಿಗೆ ಕಾರಣವಾದ ಪ್ಲಾಸ್ಮೋಡಿಯಂ ಪರಾವಲಂಬಿ ಪ್ರಕಾರವನ್ನು ಅವಲಂಬಿಸಿ ಬದಲಾಗಬಹುದು. ಮಲೇರಿಯಾದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ, ಜ್ವರ, ತಲೆನೋವು, ಸ್ನಾಯುನೋವು, ಆಯಾಸ, ಬೆವರುವಿಕೆ, ವಾಕರಿಕೆ ಇತ್ಯಾದಿ.
ಡೆಂಗ್ಯೂ, ಚಿಕುಂಗುನ್ಯ ರೋಗವು ಈಡಿಸ್ ಇಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಯು ಸ್ವಚ್ಛವಾದ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು, ತನ್ನ ವಂಶಾಭಿವೃದ್ಧಿಯನ್ನು ಮಾಡುತ್ತದೆ. ಈ ರೋಗದಲ್ಲಿ ವಿಪರೀತ ಜ್ವರ ಮೈ-ಕೈ ನೋವು, ತೆಲೆ ನೋವು ಹಾಗೂ ಕಣ್ಣುಗಳು ಕೆಂಪಾಗುವುಕೆ ಲಕ್ಷಣಗಳು ಕಂಡು ಬರುತ್ತವೆ.
ಈಡೀಸ್ ಜಾತಿಯ ಸೊಳ್ಳೆಗಳು ವಿಶಿಷ್ಠ ಲಕ್ಷಣಗಳಾದ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುವವು, ಶುದ್ಧವಾದ ನೀರಿನಲ್ಲಿ ಮತ್ತು ನೀರು ಶೇಖರಣಾ ಪರಿಕರಗಳು, ಘನ ತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ವಂಶಾಭಿವೃದ್ಧಿಯಾಗುವ ಕುರಿತು ಜಾಗೃತಿ ಮೂಡಿಸಬೇಕು. ಈಡಿಸ್ ಸೊಳ್ಳೆಗಳು, ಮೊಟ್ಟೆಗಳು, ಸೂಕ್ತಾವಸ್ಥೆಯಲ್ಲಿ ತಿಂಗಳಗಟ್ಟಲೆ ಇರುವ ಕುರಿತು ತಿಳಿಸಿ, ಪೈಬರ್ ಬಕೆಟುಗಳಲ್ಲಿ, ಸಂಗ್ರಹವಿರುವ ನೀರಿನಲ್ಲಿ ಈಡೀಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಮತ್ತು ನಿಯಂತ್ರಣಕ್ಕಾಗಿ ಲಾರ್ವಾ ನಾಶಕ ಬಳಸುವುದು, ಪ್ಲಾಸ್ಟಿಕ್ ಹೋದಿಕೆಯಿಂದ ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವುದು, ಸೊಳ್ಳೆ ನಿರೋಧಕಗಳನ್ನು ಬಳಸುವುದು ಅವಶ್ಯವಾಗಿದೆ.
ಈ ರೋಗಕ್ಕೆ ನಿಖರವಾದ ಚಿಕಿತ್ಸೆಯಿಲ್ಲ. ರೋಗದ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುವುದು. ಅದಕ್ಕಾಗಿ ಈ ರೋಗದ ಬಗ್ಗೆ ಜನರಿಗೆ ಹೆಚ್ಚಿನ ಅರಿವನ್ನು ಮೂಡಿಸಬೇಕು. ಈ ರೋಗ ಬರದ ಹಾಗೆ ಮುನ್ನೆಚರಿಕೆ ಕ್ರಮಗಳನ್ನು ವಹಿಸಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದ ಹಾಗೆ ಸ್ವಚ್ಛವಾಗಿ ಇಡಬೇಕು ಮತ್ತು ಮನೆಯ ಒಳಗೆ ನೀರು ತುಂಬುವ ಪಾತ್ರೆಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆದು ಒಣಗಿಸಿ ನೀರು ತುಂಬಿ ಮೇಲೆ ಮುಚ್ಚಬೇಕು. ಮನೆಯ ಕಿಡಕಿಗಳಿಗೆ ಜಾಲರಿಗಳನ್ನು ಬಳಸಬೇಕು, ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಸಾಯಂಕಾಲ ಬೇವಿನ ಸೊಪ್ಪಿನ ಹೊಗೆ ಹಾಕಬೇಕು ಮತ್ತು ಯಾವುದೇ ವಿಧದ ಜ್ವರವಿದ್ದಲ್ಲಿ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು.
ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ರಾಷ್ಟ್ರೀಯ ಡೆಂಗೀ ದಿನ, ಜಾಥಾ ಮತ್ತು ಮಾನವ ಸರಪಳಿ ಪ್ರದರ್ಶನಗಳ ಮೂಲಕ ಜಾಗೃತಿ ಮೂಡಿಸಲಾಗಿದೆಯಲ್ಲದೆ, ಜಿಲ್ಲೆಯಲ್ಲಿ ಡೆಂಗೀ ನಿಯಂತ್ರಣ ಮಾಡಲು ಗುಣಮಟ್ಟದ ಲಾರ್ವಾ ಸಮೀಕ್ಷೆ ಹಾಗೂ ಜ್ವರ ಸಮೀಕ್ಷೆ ಮಾಡಿ ಖಚಿತ ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಿ, ಸೂಕ್ತ ಆರೈಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದವರಿಗೆ ಕರೆ ನೀಡಲಾಗಿದೆ.
ಗದಗ-ಬೆಟಗೇರಿ ನಗರಸಭೆ ಪೌರ ಕಾರ್ಮಿಕರಿಗೆ ಮಲೇರಿಯಾ ಮುನ್ನೆಚರಿಕಾ ಅರಿವು ಮೂಡಿಸುವ ಕಾರ್ಯಕ್ರಮಗಳು ಮತ್ತು ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ಜಿಲ್ಲಾ ಮಟ್ಟದ ಜಾಥಾ, ಮಾನವ ಸರಪಳಿ ಪ್ರದರ್ಶನ, ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮಲೇರಿಯಾದ ಯಾವುದೇ ರೋಗಲಕ್ಷಣಗಳನ್ನು ಕಂಡುಬಂದರೆ, ವಿಶೇಷವಾಗಿ ಮಲೇರಿಯಾ ಹರಡುವ ಹೆಚ್ಚಿನ ಅಪಾಯವಿರುವ ಪ್ರದೇಶಕ್ಕೆ ಇತ್ತೀಚೆಗೆ ಪ್ರಯಾಣಿಸಿದ್ದರೆ, ತಕ್ಷಣವೇ ವೈದ್ಯಕೀಯ ಆರೈಕೆಯನ್ನು ಪಡೆಯಬೇಕು. ಸಮಯೋಚಿತ ರೋಗ ನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯು ಗಂಭೀರ ತೊಡಕುಗಳನ್ನು ತಡೆಯಲು ಮತ್ತು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ.
“ಡೆಂಗೀ ನಿವಾರಣೆ ನಿಟ್ಟಿನಲ್ಲಿ ಸಮುದಾಯ ಪಾತ್ರ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಅಗ್ಯತ ಸಾರ್ವಜನಿಕರ ಸಹಕಾರ ದೊರೆತಾಗ ಮಾತ್ರ ಗುರಿ ಸಾಧನೆಯು ಸುಲಭ ಸಾಧ್ಯವಾಗುತ್ತದೆ. ಈ ವರ್ಷದ ಸರ್ಕಾರದ ಘೋಷ ವಾಕ್ಯವಾದ `ಡೆಂಗೀ ಸೋಲಿಸಲು ಹೆಜ್ಜೆಗಳನ್ನು ಪರಿಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡಿ’ ಇದಕ್ಕೆ ಉತ್ತೇಜನ ನೀಡೋಣ”
– ಡಾ. ಹೆಚ್.ಎಲ್. ಗಿರಡ್ಡಿ.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ
ನಿಯಂತ್ರಣ ಅಧಿಕಾರಿಗಳು, ಗದಗ.
-ರಾಘವೇಂದ್ರ ಶಾಂತಗೀರಿ.
ಅಪ್ರೆಂಟಿಸ್, ವಾರ್ತಾ ಮತ್ತು ಸಾ.ಸಂ. ಇಲಾಖೆ.
ಗದಗ.