ಚಿಕ್ಕಮಗಳೂರು:– ಆನೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇಲ್ಲಿನ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಹೆಬ್ಬೆ ವಲಯದಲ್ಲಿ ಜರುಗಿದೆ.
50 ವರ್ಷ ಪ್ರಾಯದ ಒಂಟಿ ಸಲಗ ಸಾವನ್ನಪ್ಪಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕಳ್ಳ ಬೇಟೆ ನಿಗ್ರಹ ಪಡೆಯ ಸಿಬ್ಬಂದಿ ಅರಣ್ಯದಲ್ಲಿ ಗಸ್ತು ತಿರುಗುವಾಗ ಆನೆಯ ಕಳೆಬರಹ ಪತ್ತೆಯಾಗಿದೆ. ಕಳೆದ ಹಲವು ತಿಂಗಳುಗಳಿಂದ ಈ ಆನೆಯ ಎಡಗಾಲಿಗೆ ಪೆಟ್ಟಾಗಿದ್ದರಿಂದ ಕುಂಟುತ್ತಾ ಅರಣ್ಯದಲ್ಲಿ ಆಹಾರ ಹುಡುಕುತ್ತಿತ್ತು ಎಂದು ಹೇಳಲಾಗಿದೆ.
ಆನೆಯ ಮೃತ ದೇಹವನ್ನು ಅರಣ್ಯಾಧಿಕಾರಿ ಪ್ರಕಾಶ್ ನೇತೃತ್ವದ ಪಶು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದೆ. ಈ ವೇಳೆ ಆನೆಯ ಹೊಟ್ಟೆಯಲ್ಲಿ ಆಹಾರ ಕಂಡು ಬಂದಿಲ್ಲ. ಹೀಗಾಗಿ ಆನೆ ಆಹಾರ ಸಿಗದೇ ಹಸಿವಿನಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.



