ಚಿಕ್ಕಮಗಳೂರು:- ಕಳೆದ ಮಾ.16ರಂದು ನಾಪತ್ತೆಯಾಗಿದ್ದ ಕಳಸ ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ.
ಕಳಸ ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ಬಾಳೆಹೊಳೆ ಮೂಲದ ವಿದ್ಯಾರ್ಥಿ ಶ್ರೇಯಸ್, ಮಾ.16ರಂದು ಕಾಣೆಯಾಗಿದ್ದ. ಈ ಬಗ್ಗೆ ಪೋಷಕರು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಲ್ಲದೇ ವಿದ್ಯಾರ್ಥಿ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತು.
ಆದರೆ ಇದೀಗ ಬಾಲಕ ಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ವಿದ್ಯಾರ್ಥಿ ಮೂಲತಃ ಹಾಸನ ಜಿಲ್ಲೆಯ ಬೇಲೂರು ತಾಲೂಕಿನವನಾಗಿದ್ದು, ಬಾಳೆಹೊಳೆಯಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿದ್ದುಕೊಂಡು ವ್ಯಾಸಾಂಗ ಮಾಡುತ್ತಿದ್ದ. ಪರೀಕ್ಷೆಗೆ 2 ದಿನ ಇರುವಂತೆ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಲೆ ಬಿಟ್ಟ ನಂತರ ಭದ್ರಾ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾನೋ? ಈತನೊಂದಿಗೆ ಬೇರೆ ಸ್ನೇಹಿತರು ತೆರಳಿದ್ದರೆ? ಯಾರಾದರೂ ಕೊಲೆ ಮಾಡಿರಬಹುದೆ? ತಾನೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆ? ಹೀಗೆ ಹತ್ತುಹಲವು ಅನುಮಾನಗಳು ಮೂಡಿವೆ.
ಒಟ್ಟಾರೆ ಪೊಲೀಸರ ತನಿಖೆಯಿಂದ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.