ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಶಿವಾನಂದ ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳ ನಡುವಿನ ಹಗ್ಗ ಜಗ್ಗಾಟಕ್ಕೆ ಶನಿವಾರ ನಡೆಯಬೇಕಿದ್ದ 104ನೇ ವರ್ಷದ ಜಾತ್ರಾ ಮಹೋತ್ಸವ ರದ್ದುಗೊಂಡಿತು.
ಉತ್ತರಾಧಿಕಾರತ್ವ ವಿಚಾರವಾಗಿ ಹೈಕೋರ್ಟ್ ಮಧ್ಯಂತರ ಸೂಚನೆ ಪಾಲನೆ ವಿಷಯವಾಗಿ ಉಭಯ ಶ್ರೀಗಳ ಮಧ್ಯೆ ಒಮ್ಮತ ಮೂಡದ ಕಾರಣ, ಗದಗ ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ ರಥೋತ್ಸವ, ಅಡ್ಡಪಲ್ಲಕ್ಕಿ ಸೇರಿದಂತೆ ಜಾತ್ರಾ ಮಹೋತ್ಸವದ ಎಲ್ಲ ಧಾರ್ಮಿಕ ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಜಾತ್ರಾ ಮಹೋತ್ಸವದ ಎರಡು ದಿನ ಮುನ್ನ ಉಭಯ ಶ್ರೀಗಳ ಪರ ಭಕ್ತರು ಸಭೆ ನಡೆಸಿ, ಒಮ್ಮತದ ನಿರ್ಧಾರಕ್ಕೆ ಬರುವ ಪ್ರಯತ್ನ ನಡೆಸಿದರು. ಆಗ ಹಿರಿಯ ಶ್ರೀಗಳು, ಕಿರಿಯ ಶ್ರೀಗಳ ಜೊತೆಗೂಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ, ಬಂಗಾರ ಕಿರೀಟ, ಅಡ್ಡಪಲ್ಲಕ್ಕಿಯಲ್ಲಿ ತಾವೇ ಕೂಡುವುದಾಗಿ ಪಟ್ಟು ಹಿಡಿದರು. ಇದಕ್ಕೆ ಕಿರಿಯ ಶ್ರೀಗಳು ಒಪ್ಪಿಗೆ ಸೂಚಿಸಿದ್ದರು. ಆದರೆ ಶುಕ್ರವಾರ ಸಂಜೆ ಏಕಾಏಕಿ ನಿರ್ಧಾರ ಬದಲಿಸಿದ ಹಿರಿಯ ಶ್ರೀಗಳು, ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಕೇವಲ ತಮ್ಮ ಸಾನ್ನಿಧ್ಯದಲ್ಲಿ ಮಾತ್ರ ನಡೆಯಬೇಕು ಎಂದರು.
ಇದಕ್ಕೆ ಕಿರಿಯ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿಸುತ್ತಿದ್ದಂತೆ ಉಭಯ ಶ್ರೀಗಳ ಪರ ಭಕ್ತರಲ್ಲಿ ಮತ್ತೆ ವಾಗ್ವಾದ ಮುಗಿಲು ಮುಟ್ಟಿತು. ಅಂತಿಮವಾಗಿ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರು ಶ್ರೀಮಠದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ತಡೆ ನೀಡಿ ಆದೇಶ ಹೊರಡಿಸಿದರು.
ಜಾತ್ರಾ ಮಹೋತ್ಸವಕ್ಕೆ ತಹಸೀಲ್ದಾರರು ತಡೆ ನೀಡಿದರೂ ಭಕ್ತರು ಕರ್ತೃ ಗದ್ದುಗೆ ದರ್ಶನ ಪಡೆಯಬಹುದಾಗಿದ್ದು, ಯಾವುದೇ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಶ್ರೀಮಠದ ಆವರಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಸಮಾಜಕ್ಕೆ ಬುದ್ಧಿ ಹೇಳಬೇಕಾದ ಪೀಠಾಧಿಪತಿಗಳೇ ಹೀಗೆ ಒಣ ಪ್ರತಿಷ್ಠೆಯ ಕಾರಣಕ್ಕೆ ಶ್ರೀಮಠದ ಸಂಪ್ರದಾಯಕ್ಕೆ ಧಕ್ಕೆ ತಂದಿರುವುದು ನೋವು ತಂದಿದೆ. ಉಭಯ ಶ್ರೀಗಳಿಗೆ ಎಷ್ಟೇ ಮನವರಿಕೆ ಮಾಡಿದರೂ ತಮ್ಮ ಹಟ ಬಿಡದ ಕಾರಣ ಇವತ್ತು ಭಕ್ತರು ಸಂಕಷ್ಟ ಎದುರಿಸಬೇಕಾಗಿದೆ. ಶತಮಾನದ ಇತಿಹಾಸ ಹೊಂದಿರುವ ಶ್ರೀಮಠದಲ್ಲಿ ಕೇವಲ ಒಣ ಪ್ರತಿಷ್ಠೆಗೆ ಸಂಪ್ರದಾಯ ಬಲಿಯಾಗಿರುವುದು ನೋವು ತಂದಿದೆ ಎಂದು ಹಲವು ಭಕ್ತರು ಬೇಸರ ವ್ಯಕ್ತಪಡಿಸಿದರು.
ಮಠದ ಹಿರಿಯ ಶ್ರೀಗಳು ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ವರ್ತಿಸಿ ಮಠದ ಪರಂಪರೆ ಹಾಳು ಮಾಡಿದ್ದಾರೆ. ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಕಿರಿಯ ಶ್ರೀಗಳೊಂದಿಗೆ ಸಾನಿಧ್ಯ ವಹಿಸುವದಾಗಿ ಹೇಳಿ, ನಂತರ ಹೇಳಿಕೆ ಬದಲಿಸಿರುವದು ಸರಿಯಲ್ಲ. ಹಿರಿಯ ಶ್ರೀಗಳು ಇತರರ ಮಾತುಗಳನ್ನು ಕೇಳಿ ಸಲ್ಲದ ವಿವಾದಕ್ಕೆ ದಾರಿ ಮಾಡಿಕೊಡದೆ ಕಿರಿಯ ಶ್ರೀಗಳೊಂದಿಗೆ ಸಮಾಜಕ್ಕೆ ಮಾರ್ಗದರ್ಶಕರಾಗಬೇಕು. ಜಾತ್ರಾ ಮಹೋತ್ಸವದ ಹೆಸರಿನಲ್ಲಿ ಜಾತ್ರೆ ಸಮಿತಿ ಪದಾಧಿಕಾರಿಗಳು ಸಂಗ್ರಹಿಸಿದ ಹಣಕಾಸು, ದವಸ-ಧಾನ್ಯಗಳು, ಇತರೆ ವಸ್ತುಗಳ ಬಗ್ಗೆ ಸಮಸ್ತ ಭಕ್ತರ ಸಭೆ ಕರೆದು ಲೆಕ್ಕ ಒಪ್ಪಿಸಿ ಸಮಿತಿ ವಿಸರ್ಜಿಸಬೇಕು. ಪುನಃ ಮುಂದಿನ ವರ್ಷ ಹೊಸದಾಗಿ ಸಮಸ್ತ ಭಕ್ತರ ಸಮ್ಮುಖದಲ್ಲಿ ಜಾತ್ರಾ ಸಮಿತಿ ರಚಿಸಬೇಕು.
– ರಾಜೂ ಖಾನಪ್ಪನವರ.
ರಾಜ್ಯ ಸಂಚಾಲಕ, ಹಿಂದೂ ವೀರಶೈವ-ಲಿಂಗಾಯತ ಯುವ ವೇದಿಕೆ.



