ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂಬುದನ್ನು ಮನಗಂಡು ಅವರಿಗೆ ಉತ್ತಮ ಅವಕಾಶಗಳು ಮತ್ತು ಸವಲತ್ತುಗಳನ್ನು ನೀಡುವ ಉದ್ದೇಶದಿಂದ ಇನ್ನರ್ ವೀಲ್ ಸಂಸ್ಥೆ ಗದಗ-ಬೆಟಗೇರಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡರು.
ಸರ್ಕಾರ ಒದಗಿಸುತ್ತಿರುವ ಸೌಕರ್ಯಗಳನ್ನು ಹೊರತುಪಡಿಸಿ ಅವರಿಗೆ ಅವಶ್ಯಕತೆ ಇರುವ ಕಲಿಕಾ ಸಾಮಗ್ರಿಗಳನ್ನು ಒದಗಿಸಿದರು. ಪದಗ್ರಹಣ ಸಮಾರಂಭಕ್ಕೆ ಆಗಮಿಸಿದ ರೇವತಿ ಹುಯಿಲಗೋಳ ಅವರು ವಿದ್ಯಾರ್ಥಿ ಜೀವನ ಮತ್ತು ಅದರ ಮಹತ್ವವನ್ನು ಕುರಿತು ಮಾತನಾಡಿದರು. ಇನ್ನರ್ ವೀಲ್ ಸಂಸ್ಥೆಯ ನೂತನ ಅಧ್ಯಕ್ಷರಾದ ಅಶ್ವಿನಿ ಜಗತಾಪ್ ವಿದ್ಯಾರ್ಥಿಗಳ ಭವ್ಯ ಜೀವನಕ್ಕಾಗಿ ನಮ್ಮಿಂದಾಗಬಹುದಾದ ಎಲ್ಲಾ ಸಹಕಾರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.
ವೇದಿಕೆಯ ಮೇಲೆ ಪ್ರೇಮಾ ಗುಳಗೌಡರ್, ನಿಕಟ ಪೂರ್ವ ಅಧ್ಯಕ್ಷರಾದ ನಾಗರತ್ನಾ ಮಾರನಬಸರಿ ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು.