ಕೋಲಾರ: ತಾಯಿತನದ ಪಾವಿತ್ರ್ಯಕ್ಕೂ ಬೆಲೆ ಕಟ್ಟಿದ ಅಮಾನವೀಯ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಹೆತ್ತ ಗಂಡು ಮಗುವನ್ನು ಕೇವಲ ಐದು ದಿನಗಳಲ್ಲಿ ಲಕ್ಷ ಲಕ್ಷ ಹಣಕ್ಕಾಗಿ ಮಾರಾಟ ಮಾಡಿರುವ ಆರೋಪದಡಿ ದಂಪತಿ ಮತ್ತು ಮಧ್ಯವರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೀತು ಮತ್ತು ರಾಘವೇಂದ್ರ ದಂಪತಿಗೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಮೂರನೇ ಮಗು ಜನಿಸಿತ್ತು. ಈಗಾಗಲೇ ಇಬ್ಬರು ಮಕ್ಕಳನ್ನು ಹೊಂದಿದ್ದ ಈ ದಂಪತಿ, ಮತ್ತೊಂದು ಮಗು ಬೇಡವೆಂದು ನಿರ್ಧರಿಸಿ, ಗಂಡು ಮಗುವನ್ನು 2 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಪತಿ ರಾಘವೇಂದ್ರಗೆ ಪರಿಚಿತನಾಗಿದ್ದ ನಾರಾಯಣಸ್ವಾಮಿ ಎಂಬಾತ ಈ ಮಕ್ಕಳ ಮಾರಾಟ ಜಾಲದ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾನೆ. ದಂಪತಿಯಿಂದ ಮಗು ಪಡೆದುಕೊಂಡ ನಾರಾಯಣಸ್ವಾಮಿ, ಅದನ್ನು ಚಿಂತಾಮಣಿ ಮೂಲದ ವ್ಯಕ್ತಿಗೆ ಇನ್ನಷ್ಟು ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಮಗು ಮಾರಾಟದ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆಯೇ ಶ್ರೀನಿವಾಸಪುರ ಪೊಲೀಸರು ದಂಪತಿಯನ್ನು ನಿನ್ನೆ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ ಮಧ್ಯವರ್ತಿ ನಾರಾಯಣಸ್ವಾಮಿಯನ್ನು ಬಂಧಿಸಿ, ಮಗು ಯಾರ ಬಳಿ ಇದೆ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.
ಸದ್ಯ ಮಗು ಮರಳಿ ವಾಪಸ್ ಪಡೆಯಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಈ ಪ್ರಕರಣದ ಹಿಂದೆ ಸಂಘಟಿತ ಮಕ್ಕಳ ಮಾರಾಟ ಜಾಲವಿದೆಯೇ ಎಂಬುದರ ಕುರಿತು ಆಳವಾದ ತನಿಖೆ ನಡೆಯುತ್ತಿದೆ.



