ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳು ಸಂತೋಷವಾಗಿ ರಕ್ಷಿತ ವಾತಾವರಣದಲ್ಲಿ, ಗೌರವಯುತವಾಗಿ ಯಾವುದೇ ತಾರತಮ್ಯವಿಲ್ಲದೇ ಬಾಲ್ಯವನ್ನು ಅನುಭವಿಸಬೇಕು, ಬೆಳೆಯಬೇಕು. ವಿಶೇಷ ಚೇತನ ಮಕ್ಕಳ ಬೆಳವಣಿಗೆಗೆ ನಮ್ಮೆಲ್ಲರ ಪ್ರೀತಿಯ ಸಹಕಾರ ಅವಶ್ಯವೆಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಶನಿವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಗಂಗಿಮಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿದ ವಿಶೇಷ ಚೇತನರ ಅರಿವು ಹಾಗೂ ಉತ್ತಮ ಪರಿಸರ ನಿರ್ಮಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶೇಷ ಚೇತನರ ವ್ಯಕ್ತಿತ್ವ, ಪ್ರತಿಭೆ, ಮಾನಸಿಕ-ದೈಹಿಕ ಸಾಮರ್ಥ್ಯಗಳು ವಿಕಾಸವಾಗುವಂತಹ ಶಿಕ್ಷಣ ಬೇಕು. ಅದಕ್ಕೆ ನಾವೆಲ್ಲರೂ ಶ್ರಮಿಸಬೇಕು. ವಿಶೇಷ ಚೇತನರಿಗಾಗಿ ಉತ್ತಮ ಪರಿಸರ ನಿರ್ಮಾಣ ಅವಶ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಎಸ್.ವಿ. ಚಳಗೇರಿ, ಎಲ್ಲ ಮಕ್ಕಳು ತಾರತಮ್ಯವಿಲ್ಲದ ಶಿಕ್ಷಣ ಪಡೆಯಬೇಕು. ವಿಶೇಷ ಚೇತನ ಮಕ್ಕಳಿಗಾಗಿ ಶಾಲೆಯಲ್ಲಿ ಅನೇಕ ಸೌಲಭ್ಯಗಳಿದ್ದು ಅವುಗಳ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ವಿಕಲತೆಯ 21 ವರ್ಗಿಕರಣಗಳು ಹಾಗೂ ಅವುಗಳ ಲಕ್ಷಣಗಳನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯೆ ಆರ್.ಬಿ. ಸಂಕಣ್ಣವರ ವಹಿಸಿ ಮಾತನಾಡಿ, ವಿಶೇಷ ಚೇತನರು ಶಕ್ತಿ ಶಾಲಿಗಳು. ಅವರಿಗೆ ಪ್ರೋತ್ಸಾಹ ದೊರೆತಲ್ಲಿ ಅವರು ಸಮರ್ಥರಾಗುವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವರು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಗದಗ ಜಿಲ್ಲಾ ಘಟಕಕ್ಕೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಶೇಷ ಚೇತನ ಶಿಕ್ಷಕಿ ಆರ್.ಬಿ. ಹಾದಿಮನಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಪಿ. ಹಿರೇಮಠ, ಡಿ.ಎಸ್. ಮೀಶೇನವರ, ಎಸ್.ಜಿ. ಗಿರಿತಮ್ಮಣ್ಣವರ, ಐ.ಡಿ. ಕಬ್ಬೇರಹಳ್ಳಿ, ಅಲ್ತಾಫ್ ನದಾಫ್, ಜ್ಯೋತಿ ಅಂಗಡಿ, ನೀಲಮ್ಮ ಹಿರೇಮಠ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಆರ್.ಡಿ. ಮಗಜಿ ಸ್ವಾಗತಿಸಿದರು, ವ್ಹಿ.ಆರ್. ಹಂಸಿ ನಿರೂಪಿಸಿದರು. ಸಿ.ಎಸ್. ಬೆಳಹಾರ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಪಾಲಕರು, ಸಿಬ್ಬಂದಿ ಉಪಸ್ಥಿತರಿದ್ದರು.
ಅತಿಥಿಗಳಾಗಿ ಆಗಮಿಸಿದ್ದ ಮುಖ್ಯೋಪಾಧ್ಯಾಯೆ ಎಸ್.ಆರ್. ಚಾರಹುಸೇನ ಮಾತನಾಡಿ, ವಿಕಲಚೇತನರು ಎಂದಾಕ್ಷಣ ಅಸಮರ್ಥರು ಎಂರ್ಥವಲ್ಲ. ಅವರಲ್ಲಿಯೂ ವಿಶೇಷ ಸಾಮರ್ಥ್ಯವಿರುತ್ತದೆ. ಸೋಮಾರಿಗಳಾಗದೇ ನಿರಂತರ ಶ್ರಮ ವಹಿಸುವ ಮೂಲಕ ಸಾಧನೆಯ ಹಾದಿ ಹಿಡಿಯಬೇಕು. ವಿಕಲಾಂಗರಾದ ಅದೆಷ್ಟೋ ಮಂದಿ ಕೆಎಎಸ್/ಐಎಎಸ್ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಅಂತಹ ಜೀವನಾದರ್ಶಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡರೆ ಜೀವನದಲ್ಲಿ ಸಾಧನೆ ಹಿಂಬಾಲಿಸುತ್ತದೆ ಎಂದರು.