ಲಕ್ಮೇಶ್ವರ: ಮಕ್ಕಳಿಗೆ ಬಾಲ್ಯದಲ್ಲಿಯೇ ಅಂಕಗಳಿಕೆ ಒತ್ತಡ ಹೇರದೇ ಅವರು ಸ್ವಚ್ಛಂದವಾಗಿ ಸಂತೋಷದಿಂದ ಆಡುತ್ತಾ, ಹಾಡುತ್ತಾ ಕಲಿಯಬೇಕು ಈ ನಿಟ್ಟಿನಲ್ಲಿ ಶಾಲೆ ಮತ್ತು ಮನೆಯಲ್ಲಿ ಅಂತಹ ವಾತಾವರಣ ಸೃಷ್ಟಿಯಾಗಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಗುರುರಾಜ ಹೊಸಕೋಟಿ ಅಭಿಪ್ರಾಯಪಟ್ಟರು.
ಅವರು ಬುಧವಾರ ಪಟ್ಟಣದ ಎಂಜಿಎಂ ಫೌಂಡೇಶನ್ ಮತ್ತು ಎಂಜಿಎಂ ಯುನಿವರ್ಸಲ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಹಿಂದೆ ಅವಿಭಕ್ತ ಕುಟುಂಬದಲ್ಲಿ ಮಕ್ಕಳ ಬಾಲ್ಯ ಬಹಳಷ್ಟು ಸಂಭ್ರಮದಿಂದ ಕೂಡಿರುತ್ತಿತ್ತು. ಅಲ್ಲಿ ದೊಡ್ಡಪ್ಪ, ಚಿಕ್ಕಪ್ಪ, ಅಜ್ಜಿ ಹೀಗೆ ಹಿರಿಯರ ಮಮತೆ, ವಾತ್ಸಲ್ಯದ ಒಡನಾಟ, ಸಂಬಂಧ-ಬಾಂಧವ್ಯದೊಂದಿಗೆ ಬದುಕಿನ ಪಾಠ ಕಲಿಯುತ್ತಿದ್ದರು. ಈಗ ಪಾಲಕರ ಒತ್ತಡದ ಬದುಕು ಮಕ್ಕಳಿಗೆ ಹೋಮಂವರ್ಕ ಒತ್ತಡ ಮಾತ್ರ. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ನಮ್ಮ ಜನಪದ ಸಾಹಿತ್ಯ ಬದುಕಿನ ಎಲ್ಲ ಮಜಲುಗಳ ಪಾಠವನ್ನು ಕಲಿಸುತ್ತದೆ. ಮಕ್ಕಳಿಗೆ ಜನಪದ ಸಾಹಿತ್ಯ, ಹಾಡುಗಳನ್ನು ಕಲಿಸಿ ಆ ಮೂಲಕ ಜನಪದ ಸಂಸ್ಕೃತಿ ಉಳಿಯಲಿ ಎಂದು ಹೇಳಿದ ಅವರು ಲಕ್ಮೇಶ್ವರದಎಂ.ಜಿ.ಎಂ ಸಂಸ್ಥೆ ಉತ್ತಮ ವಾತಾವರಣದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಮತ್ತು ಅನೇಕ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಪಾಲಕ ಅತಿಥಿಯಾಗಿ ನೇತ್ರಾ ಕಲ್ಲಣ್ಣನವರ, ಪ್ರೊ.ಬಿ.ಪಿ. ಜೈನರ್, ಮಾಜಿ ಯೋಧ ಬಸವರಾಜ ಸೂರಣಗಿ ಮತ್ತು ಜೂನಿಯರ್ ವಿಷ್ಣುವರ್ಧನ್ ಭಾಗವಹಿಸಿ, ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಂಸ್ಥೆಯ ಅಧ್ಯಕ್ಷರಾದ ವಿಶ್ವನಾಥ ಮಹಾಂತ ಶೆಟ್ಟರ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ನಿರ್ದೇಶಕರುಗಳಾದ ಬಸವೇಶ್ವರ ಮಹಾಂತಶೆಟ್ಟರ, ವಿಜಯ ಮಹಾಂತಶೆಟ್ಟರ, ಮಂದಾಕಿನಿ ಅನಿಶೆಟ್ಟರ, ವೀಣಾ ಹಾನಗಲ್, ಆಯ್.ಎಫ್. ಮುದುಗಲ್, ಮುಖ್ಯೋಪಾಧ್ಯಾಯನಿ ಕವಿತಾ ಮೆಣಸಗಿ ಹಾಗೂ ದೀಪಾಲಿ ಪಾಟೀಲ ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯ, ನಾಟಕ, ಗಾಯನ, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಕ್ರೀಡಾ ಸಾಧನೆಗಳ ಗೌರವ ಸಮಾರಂಭಗಳು ಯಶಸ್ವಿಯಾಗಿ ಜರುಗಿದವು. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪೋಷಕರ ಹಾಜರಿದ್ದರು.
ಲಕ್ಮೇಶ್ವರದ ಎಂಜಿಎಂ ಫೌಂಡೇಶನ್ ಮತ್ತು ಎಂಜಿಎಂ ಯುನಿವರ್ಸಲ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಗುರುರಾಜ ಹೊಸಕೋಟಿ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವನಾಥ ಮಹಾಂತಶೆಟ್ಟರ, ಬಸವೇಶ ಮಹಾಂತಶೆಟ್ಟರ ಇದ್ದರು.