ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಲಕ್ಕುಂಡಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಶಿಕ್ಷಕ ಬಸವರಾಜ ಗರ್ಜಪ್ಪನವರ, ಜವಾಹರಲಾಲ್ ನೆಹರೂ ಅವರು ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಬೇಕು ಎಂದು ಹೇಳಿ ಮಕ್ಕಳ ಬಗ್ಗೆ ಇರುವ ಅವರ ಅಪಾರ ಪ್ರೀತಿ, ವಾತ್ಸಲ್ಯವನ್ನು ತೋರ್ಪಡಿಸಿದ್ದರಿಂದ ಇಂದು ಮಕ್ಕಳ ದಿನವನ್ನು ಆಚರಿಸಿ ಅವರ ಸಂಭ್ರಮವನ್ನು ನೋಡುವಂತಾಗಿದೆ ಎಂದರು.
ಮಕ್ಕಳ ಭಾಷಣ, ಹಾಡು, ಮ್ಯೂಜಿಕ್ ಚೇರ್, ಕಪ್ಪೆಜಿಗಿತ ಆಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. 4ನೇ ತರಗತಿ ವಿದ್ಯಾರ್ಥಿ ರಂಗನಗೌಡ ಪಾಟೀಲ ನೆಹರೂರವರ ವೇಷ ಧರಿಸಿ ಗಮನ ಸೆಳೆದನು.
ರಫೀಯಾ ದಂಡಿನ, ಎ.ಎಂ. ದಂಡಿನ ಅವರು ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಿಂದ ಮಧ್ಯಾಹ್ನದ ಊಟದೊಂದಿಗೆ ಸಿಹಿಯನ್ನು ಉಣಬಡಿಸಿದರು. ಮುಖ್ಯ ಶಿಕ್ಷಕಿ ಆರ್.ಬಿ. ಬರದ್ವಾಡ, ಪಿ.ಬಿ. ಬರದ್ವಾಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಂ. 1ರ ವ್ಯವಸ್ಥಾಪಕ ಶರಣಪ್ಪ ಗರ್ಜಪ್ಪನವರ, ಅರ್ಜುನ ಚಲವಾದಿ, ಲಕ್ಷ್ಮೀ ಗರ್ಜಪ್ಪನವರ, ಅಂಬುಜಾ ಕುಲಕರ್ಣಿ ಉಪಸ್ಥಿತರಿದ್ದರು.
ಗ್ರಾಮದ ಎಂ.ಕೆ.ಬಿ.ಎಸ್, ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ, ಕೆ.ಜಿ.ಎಸ್. ಸರಕಾರಿ ಪ್ರಾಥಮಿಕ ಉರ್ದು ಶಾಲೆ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರುತಿ ನಗರ, ಬಿ.ಎಚ್. ಪಾಟೀಲ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.


