ಕಾರವಾರ:- ಮಕ್ಕಳ ಕಾಟ ತಾಳಲಾರದೆ ಮನೆ ಮುಂದಿರುವ ನಾಲ್ಕು ಮಹಡಿ ಕಟ್ಟಡದಿಂದ ಹಾರಿ ತಂದೆಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಂಕರಮಠ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ಜರುಗಿದೆ.
ಕೃಷ್ಣಾನಂದ ಪಾವಸ್ಕರ ಮೃತ ತಂದೆ. ಇವರು ಕಳೆದ ನಲವತ್ತು ವರ್ಷಗಳಿಂದ ಕಾರವಾರ ನಗರದಲ್ಲಿ ಬಂಗಾರದ ವ್ಯಾಪಾರ ಮಾಡುತ್ತಾ ಕೊಟ್ಯಾಂತರ ರೂಪಾಯಿ ಹಣ ಗಳಿಸಿದ್ದಾರೆ. ಒಳ್ಳೆಯ ಮನೆ, ಆಸ್ತಿ ಗಳಿಸಿದ್ದ ಈ ವೃದ್ಧನಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮೂವರು ಕೂಡ ಪ್ರತ್ಯೇಕ ಬಂಗಾರದ ವ್ಯಾಪಾರ ಮಾಡುತ್ತಾ ಒಳ್ಳೆಯ ಹಣ ಸಂಪಾದಿಸುತ್ತಾ ಆರ್ಥಿಕವಾಗಿ ಸದೃಢರಾಗಿದ್ದಾರೆ.
ಮೂವರಿಗೂ ಮದುವೆ ಆಗಿ ಮಕ್ಕಳಿದ್ದಾರೆ. ಇಷ್ಟೆಲ್ಲ ಸಮೃದ್ಧವಾಗಿರುವ ಈ ಕುಟುಂಬವನ್ನು ಬೆಳೆಸಿದ ವೃದ್ಧ ದಂಪತಿಗಳಿಗೆ ಮೂವರು ಮಕ್ಕಳು ನಿತ್ಯವೂ ಕಿರಿಕಿರಿ ಮಾಡುತ್ತಿದ್ದರು. ತನ್ನ ಮಕ್ಕಳ ಮನಸ್ಥಿತಿಯನ್ನ ಮೊದಲೇ ಅರಿತಿದ್ದ ಈ ವೃದ್ಧ ತಾನು ಸಂಪಾದಿಸಿದ ಹಣದಲ್ಲಿ ಕೆಲವು ಆಸ್ತಿಯನ್ನ ತನ್ನ ಹತ್ತಿರ ಇಟ್ಕೊಂಡಿದ್ದರು. ಮಕ್ಕಳು ಎಷ್ಟೆ ಕೇಳಿದರೂ ಯಾರಿಗೂ ಕೊಡದೆ ತನಗೆ ಮತ್ತು ಹೆಂಡತಿಯ ಜೀವನೋಪಾಯಕ್ಕೆ ಬೇಕಾಗುತ್ತೆ ಅಂತಾ ಗದರಿಸಿ ಕಳಿಸುತ್ತಿದ್ದರು.
ಆಗಾಗ ಮೂವರು ಮಕ್ಕಳಿಗೂ ಮತ್ತು ವೃದ್ಧ ತಂದೆಗೂ ಜಗಳ ನಡೆಯುತ್ತಲೆ ಇತ್ತು. ಕಳೆದ ಕೆಲವು ದಿನಗಳಿಂದ ಕಿರಿಯ ಮಗನಾದ ವಿನಯ್ ಮನೆಯಲ್ಲಿ ದಂಪತಿಗಳು ವಾಸವಾಗಿದ್ದರು. ತಂದೆ ಕಡೆ ಇರುವ ಆಸ್ತಿಯನ್ನೆಲ್ಲಾ ಕಿರಿಯ ಮಗನ ಪಾಲಾಗುತ್ತೆ ಅಂತಾ ಆತನ ಮನೆಗೆ ಹೋಗಿ ಆಸ್ತಿ ಪಾಲು ಮಾಡಿ ಕೊಟ್ಬಿಡಿ ಅಂತಾ ದುಂಬಾಲು ಬಿದ್ದಿದ್ದರು.
ಹೀಗೆ ಮಕ್ಕಳ ಕಾಟಕ್ಕೆ ಬೇಸತ್ತಿದ್ದ ಕೋಟ್ಯಾಧಿಶ ವೃದ್ಧ ತಂದೆ, ತಮ್ಮ ಮನೆಯ ಮುಂದಿರುವ ನಾಲ್ಕು ಮಹಡಿ ಕಟ್ಟಡ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.