ವಿಜಯಸಾಕ್ಷಿ ಸುದ್ದಿ, ಗದಗ : ಗ್ರಾಮೀಣ ಭಾಗದ ಮಕ್ಕಳಿಗೆ ಈ ರೀತಿಯ ಹೊಸತನದ ಶಿಬಿರಗಳು, ಕಮ್ಮಟಗಳ ಅವಶ್ಯಕತೆಯಿದೆ. ಶಾಲೆ ಬರೀ ಅಂಕಗಳನ್ನು ಪಡೆದುಕೊಳ್ಳುವ ಕೇಂದ್ರಗಳಾಗದೇ ಮಕ್ಕಳ ಮನೋವಿಕಾಸ ಮತ್ತು ಪ್ರತಿಭೆಯನ್ನು ಪೋಷಿಸುವ ಕೇಂದ್ರಗಳಾಗಿ ಬದಲಾಗಬೇಕು. ಸಾಹಿತ್ಯ ಮತ್ತು ಕಲೆಗಳು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸಾಧನಗಳಾಗಬೇಕು. ಇಂದಿನ ಮಕ್ಕಳಿಗೆ ಕುಟುಂಬ ಮೌಲ್ಯಗಳನ್ನು, ವ್ಯಕ್ತಿತ್ವ ವಿಕಸನವನ್ನು ಅಳವಡಿಸಿಕೊಳ್ಳಲು ಈ ರೀತಿಯ ಚಟುವಟಿಕೆಗಳು ತುಂಬಾ ಸಹಾಯ ಮಾಡುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ ಅಭಿಪ್ರಾಯಪಟ್ಟರು.
ಗದಗ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಮಲ್ಲಸಮುದ್ರ ಇವುಗಳ ಸಹಯೋಗದಲ್ಲಿ ಇತ್ತೀಚೆಗೆ ಮಲ್ಲಸಮುದ್ರದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಚಿಣ್ಣರ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಮ್. ಹಿರೇಮಠ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೊಣ್ಣೂರ, ಹರ್ತಿ ವಿಭಾಗದ ಸಿ.ಆರ್.ಪಿ ಆಯ್.ಎ. ಗಾಡಗೋಳಿ ಪಾಲ್ಗೊಂಡಿದ್ದರು.
ಪಾರ್ವತಿ ಬೇವಿನಮರದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಾರದಾ ಕಾತರಕಿ, ಜಯಶ್ರೀ ಶ್ರೀಗಿರಿ, ವಿಜಯಲಕ್ಷ್ಮಿ ಬಿಂಕದಕಟ್ಟಿ, ಮಹೇಶ ಸಂದಿಗೋಡ, ಆಯ್.ಎ. ಗಾಡಗೋಳಿ, ವಿ.ಎಮ್. ಹಿರೇಮಠ ಪಾಲ್ಗೊಂಡಿದ್ದರು.
ಮುಕ್ತಾಯ ಸಮಾರಂಭದಲ್ಲಿ ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಶಿಬಿರದ ಕೈಪಿಡಿ ಬಿಡುಗಡೆ ಮಾಡಿದರು. ಅತಿಥಿಗಳಾಗಿ ಡಿ.ಎಸ್.ತಳವಾರ ಪಾಲ್ಗೊಂಡಿದ್ದರು. ವೇದಿಕೆಯ ಮೇಲೆ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಾಪುರೆಯವರು, ಗದಗ ತಾಲೂಕಾ ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಆರ್. ಬಂಡಿ ಉಪಸ್ಥಿತರಿದ್ದರು. ಜಿ.ಬಿ. ಬಂಡಿಹಾಳ ಡಿ.ಎಸ್. ನಾಯಕ ಕಾರ್ಯಕ್ರಮ ನಿರೂಪಿಸಿದರು. ಎಫ್.ಎಮ್. ಇಟಗಿ, ಎಸ್.ಡಿ ಗುಂಜಾಳ, ಎಸ್.ಎಂ. ಅಂಗಡಿ, ವಿ.ಆರ್. ಬಾಣಾವತ್, ಕೆ.ಟಿ. ಪೂಜಾರ, ರೇಣುಕಾ ಬೆಂತೂರ ಸಹಕಾರವನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕಾ ಕಸಾಪ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ಮಾತನಾಡಿ, ಗದಗ ತಾಲೂಕಾ ಕಸಾಪ ಘಟಕ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಕಾರ್ಯಗಳನ್ನು ಮಾಡುತ್ತಿದೆ. ಗ್ರಾಮೀಣರ ಬದುಕಿನಲ್ಲಿ ಕನ್ನಡ ಕುಸಿಯದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರದ್ದಾಗಿದೆ. ಮಕ್ಕಳೊಂದಿಗೆ ಮಕ್ಕಳಾಗುವ ಸಮಯವನ್ನು ದೊಡ್ಡವರು ಅನುಭವಿಸಬೇಕು. ಅದು ಅವರ ಆರೋಗ್ಯಕ್ಕೂ ಮತ್ತು ಮಕ್ಕಳ ಮನೋವಿಕಾಸಕ್ಕೂ ಒಳ್ಳೆಯದು ಎಂದರು.