ಬೆಂಗಳೂರು:ಜೂ. 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿಜಯೋತ್ಸವ ವೇಳೆ ನಡೆದಿದ್ದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ಸಾಕಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೂ ಈ ದುರಂತದಲ್ಲಿ ತುಮಕೂರಿನ ಮನೋಜ್ ಸಾವನ್ನಪ್ಪಿದ್ದ.
ಇದರ ನೋವಲ್ಲೇ ಇದ್ದ ಅಜ್ಜಿ ಇದೀಗ ಕೊನೆಯುಸಿರೆಳೆದಿದ್ದಾರೆ. ಕುಣಿಗಲ್ನ ನಾಗಸಂದ್ರದಲ್ಲಿ ಮೊಮ್ಮಗನ ನೆನಪಲ್ಲೇ ಅಜ್ಜಿ ಕೊನೆಯುಸಿರೆಳೆದಿದ್ದಾರೆ. 70 ವರ್ಷದ ದೇವೀರಮ್ಮ ಮೃತ ಅಜ್ಜಿ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ 11 ಮಂದಿ ಆರ್ಸಿಬಿ ಅಭಿಮಾನಿಗಳ ಪೈಕಿ ತುಮಕೂರಿನ ಮನೋಜ್ ಕೂಡ ಒಬ್ಬ.
ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರದ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ಮನೋಜ್ ಯಲಹಂಕದಲ್ಲಿ ತಂದೆ, ತಾಯಿ ಹಾಗೂ ತಂಗಿ ಜೊತೆ ವಾಸವಿದ್ದ. ಆರ್ಸಿಬಿ ವಿಜಯೋತ್ಸವ ದಿನ ಸ್ನೇಹಿತರೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದ ಮನೋಜ್ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದ. ಇದೀಗ ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೂಡ ನಿಧನರಾಗಿದ್ದಾರೆ.