ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಬಹುದಿನಗಳಿಂದ ಪಟ್ಟಣದ ಬಸ್ನಿಲ್ದಾಣದ ಎದುರುಗಡೆ ಇರುವ ಪುರಸಭೆಯ ವಾಣಿಜ್ಯ ಮಳಿಗೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಸಣ್ಣ ಪುಟ್ಟ ವ್ಯಾಪಾರಸ್ಥರು, ಚಹಾ ಅಂಗಡಿಗಳು ವ್ಯಾಪಿಸಿದ್ದು, ಅಲ್ಲಿ ನಿತ್ಯ ಗಲೀಜು ತುಂಬಿಕೊಳ್ಳುತ್ತಿತ್ತು. ಮಳಿಗೆಗಗಳಿಗೆ ಬರುವ ಜನರು ಅಲ್ಲಿನ ಕಸವನ್ನು ನೋಡಿ ಅಸಹ್ಯ ಪಟ್ಟುಕೊಳ್ಳುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ವಾಣಿಜ್ಯ ಮಳಿಗೆಯ ಸುತ್ತಮುತ್ತಲಿನ ಅನೇಕ ಗೂಡಂಗಡಿಗಳನ್ನು ಪೊಲೀಸ್ ಇಲಾಖೆಯ ಸಹಕಾರದಿಂದ ತೆರುವುಗೊಳಿಸಿ ಅಲ್ಲಿನ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಿ ಗಮನ ಸೆಳೆದರು.
ಗುರುವಾರ ಮುಂಜಾನೆಯೇ ಕಾರ್ಯಾಚರಣೆಗಿಳಿದ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳು, ಪೌರಕಾರ್ಮಿಕರ ತಂಡ ಗೂಡಂಗಡಿಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆಗೆ ಮುಂದಾದರು. ಕೆಲವರು ಈ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರಾದರೂ, ನಂತರ ತಮ್ಮ ತಮ್ಮ ಸಾಮಾನು-ಸರಂಜಾಮುಗಳನ್ನು ತೆಗೆದುಕೊಂಡು ಅಲ್ಲಿಂದ ಖಾಲಿ ಮಾಡಿದರು. ಬಹುದಿನಗಳಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶ ಕಸ ವಿಲೇವಾರಿ ಘಟಕದಂತಾಗಿದ್ದು ಜನರಿಗೆ ಬೇಸರ ತರಿಸಿತ್ತು. ಅಲ್ಲಿನ ಜನರಿಗೆ ತಿಳಿ ಹೇಳುವ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ಮಳಿಗೆಯ ಹಿಂದುಗಡೆ ಪ್ರದೇಶವೂ ಸಹ ಅತಿ ಹೆಚ್ಚು ಗಲೀಜಿನಿಂದ ಕೂಡಿದ್ದು, ಅಲ್ಲಿ ಅನಾವಶ್ಯಕವಾಗಿರುವದನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಮಹೇಶ ಹಡಪದ, ಪುರಸಭೆಯವರು ಮುಖ್ಯ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಈ ವಾಣಿಜ್ಯ ಮಳಿಗೆಯ ಸುತ್ತಲಿನ ಪ್ರದೇಶದಲ್ಲಿ ಆಗುತ್ತಿರುವ ಜನದಟ್ಟಣೆ, ಗಲೀಜಿನ ಬಗ್ಗೆ ನಾಗರಿಕರು ಮೌಖಿಕವಾಗಿ ದೂರು ಸಲ್ಲಿಸಿದ್ದರು. ಇಂದಿನಿಂದ ಇಲ್ಲಿ ಯಾವುದೇ ಗೂಡಂಗಡಿಗಳನ್ನು ಹಚ್ಚುವಂತಿಲ್ಲ. ದಾರಿಯಲ್ಲಿ ಯಾರಾದರೂ ಕೂಡುವದು, ಸಣ್ಣಪುಟ್ಟ ವ್ಯಾಪಾರ ಮಾಡುವದನ್ನೂ ಸಹ ನಿಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಇದ್ದರು.