ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಕಳೆದ ಒಂದು ವಾರದ ಹಿಂದೆ ಪಟ್ಟಣದ ಪ್ರತಿಯೊಂದು ವ್ಯಾಪಾರಿ ಸಂಸ್ಥೆಗಳು ತಮ್ಮ ಅಂಗಡಿಗಳ ಮೇಲೆ ಹಾಕಲಾಗುವ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇಲ್ಲದ ನಾಮಫಲಕಗಳನ್ನು ಬುಧವಾರ ಸಂಜೆ ಪುರಸಭೆಯ ಸಿಬ್ಬಂದಿಗಳು ಮುಖ್ಯಾಧಿಕಾರಿ ಮಹೇಶ ಹಡಪದ ನೇತೃತ್ವದಲ್ಲಿ ತೆರವುಗೊಳಿಸಿದರು.
ಬುಧವಾರ ಸಂಜೆ ರಸ್ತೆಗಿಳಿದ ಪುರಸಭೆ ಸಿಬ್ಬಂದಿಗಳು ವಾಹನ, ಜೆಸಿಬಿ ಬಳಸಿ ನಾಮಫಲಕಗಳನ್ನು ತೆರವುಗೊಳಿಸಿದರು. ನಾಮಫಲಕ ಬದಲಾವಣೆ, ತೆರವುಗೊಳಿಸುವ ಬಗ್ಗೆ ವಾರ ಮೊದಲೇ ತಿಳಿಸಲಾಗಿತ್ತು. ಆದರೂ ಅನೇಕರು ಸ್ಪಂದಿಸಿರಲಿಲ್ಲ. ಬುಧವಾರ ಮತ್ತು ಗುರುವಾರ ಕಾರ್ಯಾಚರಣೆಗಿಳಿದ ಪುರಸಭೆ ಸಿಬ್ಬಂದಿ, ಪೌರ ಕಾರ್ಮಿಕರು ಸಾಕಷ್ಟು ಬೋರ್ಡ್ಗಳನ್ನು ವಶಕ್ಕೆ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಮಹೇಶ ಹಡಪದ, ಸರಕಾರದ ಆದೇಶದನ್ವಯ ನಾಮಫಲಕಗಳು ಶೇ.60ರಷ್ಟು ಕನ್ನಡ ಭಾಷೆಯಲ್ಲಿ ಇರಬೇಕು. ಅದರಲ್ಲೂ ಕನ್ನಡವೇ ಅಗ್ರಸ್ಥಾನದಲ್ಲಿರಬೇಕು. ಅದೇಶದನ್ವಯ ಕನ್ನಡೇತರ ಭಾಷೆಯ ನಾಮಫಲಕಗಳನ್ನು ತೆಗೆದು ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆಯವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಎಲ್ಲ ಅಂಗಡಿಗಳಿಗೆ ಬದಲಾವಣೆಗಾಗಿ ಸೂಚನೆ ನೀಡಲಾಗಿತ್ತು. ಆದರೆ ಕೆಲವರು ಬದಲಾವಣೆ ಮಾಡದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಮಾಡಲಾಗಿದೆ.
ಮತ್ತೆ ಕನ್ನಡೇತರ ಫಲಕಗಳು ಕಂಡುಬಂದಲ್ಲಿ ಅಂತಹ ಅಂಗಡಿಗಳ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವದು. ಎಲ್ಲರೂ ಸಹಕಾರ ನಿಡಬೇಕೆಂದು ಮನವಿ ಮಾಡಿದರು.
ಈ ವೇಳೆ ಪುರಸಭೆಯ ಆರೋಗ್ಯ ಸಹಾಯಕ ಮಂಜುನಾಥ ಮುದಗಲ್, ಶಿವಣ್ಣ ಮ್ಯಾಗೇರಿ, ಬಸವಣ್ಣೆಪ್ಪ ನಂದೆಣ್ಣವರ, ಸೇರಿದಂತೆ ಅನೇಕ ಸಿಬ್ಬಂದಿಗಳು ಹಾಜರಿದ್ದರು. ಪುರಸಭೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ವಾಹನ ನಿಲುಗಡೆ, ನಾಮಫಲಕಗಳ ಬದಲಾವಣೆಗಳಂತಹ ದಿಟ್ಟ ಕ್ರಮಗಳಿಗೆ ಆಡಳಿತ ಮುಂದಾಗಿದ್ದು, ಇದು ಕೆಲವು ದಿನಕ್ಕೆ ಸೀಮಿತವಾಗುವದು ಬೇಡ ಎಂಬ ಅಭಿಪ್ರಾಯಗಳೂ ಕೇಳಿಬಂದವು.