ವಿಜಯಸಾಕ್ಷಿ ಸುದ್ದಿ, ಗದಗ : ಪರಿಶುದ್ಧ ಹಾಗೂ ಸುಂದರ ಬರಹವು ವ್ಯಕ್ತಿಯ ವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸುತ್ತದೆ. ವಿದ್ಯಾರ್ಥಿಗಳು ಪ್ರಾಥಮಿಕ, ಮಾಧ್ಯಮಿಕ ಹಂತದಲ್ಲೇ ಕೈಬರಹಗಳನ್ನು ಸುಧಾರಿಸಿಕೊಳ್ಳಬೇಕೆಂದು ಬನಶ್ರೀ ಎಕ್ಸಲಂಟ್ ಹ್ಯಾಂಡ್ ರೈಟಿಂಗ್ ಇನ್ಸ್ಟಿಟ್ಯೂಟ್ನ ಪ್ರಾಚಾರ್ಯ ಎಫ್.ಎಸ್. ಪಾಟೀಲ ಅಭಿಪ್ರಾಯಪಟ್ಟರು.
ಅವರು ಬುಧವಾರ ಗದುಗಿನ ಚಿಕ್ಕಟ್ಟಿ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಚಿಕ್ಕಟ್ಟಿ ಸ್ಕೂಲ್ನ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ 4 ದಿನಗಳ ಕೈಬರಹ ಸುಧಾರಣೆ ತರಬೇತಿಯ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.
ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಶಿಕ್ಷಕರು ಮಕ್ಕಳ ಮನಸ್ಥಿತಿಯನ್ನರಿತು ಅವರ ತಿಳುವಳಿಕೆಯ ಆಳಕ್ಕಿಳಿದು ಬೋಧನೆ ಮಾಡಿದರೆ ಮಕ್ಕಳು ಬೇಗನೆ ಕಲಿಕೆಯತ್ತ ಆಕರ್ಷಿತರಾಗಿ, ಕಲಿಕೆಯ ಮೆಟ್ಟಿಲುಗಳನ್ನು ಹತ್ತುತ್ತಾ ಹೋಗುತ್ತಾರೆ ಎಂದರು.
ತರಬೇತಿ ಪಡೆದ ಮಕ್ಕಳಲ್ಲಿ ಬಹಳಷ್ಟು ತೀಕ್ಷ್ಣ ಮತ್ತು ಚುರುಕಾದ ಕಲಿಕಾ ಸಾಮಥ್ಯ ಇರುವುದರ ಪರಿಣಾಮವಾಗಿ, ಮಕ್ಕಳು ನಾಲ್ಕೇ ದಿನಗಳಲ್ಲಿ ಕೈಬರಹದಲ್ಲಿ ಸಾಕಷ್ಟು ಗುಣಾತ್ಮಕ ಬದಲಾವಣೆ ತೋರಿಸಿದ್ದು ಅತೀವ ಸಂತೋಷ ಎನಿಸಿದೆ. ಬರಲಿರುವ ದಿನಗಳಲ್ಲಿ ಮಕ್ಕಳ ಭವಿಷ್ಯ ಸುಂದರವಾಗಿ ರೂಪುಗೊಳ್ಳಲೆಂದರು.
ಮುಖ್ಯ ಅತಿಥಿ, ಪತ್ರಕರ್ತ ಬಸವರಾಜ ದಂಡಿನ ಮಾತನಾಡಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಮುಂಚೂಣಿಯಲ್ಲಿರುವ ಚಿಕ್ಕಟ್ಟಿ ಶಿಕ್ಷಣ ಸಮೂಹ ಸಂಸ್ಥೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಪಠ್ಯೇತರ ಚಟುವಟಿಕೆಗೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳಲ್ಲದೆ ಇಂತಹ ವಿಶಿಷ್ಠ ತರಬೇತಿಯನ್ನು ಏರ್ಪಡಿಸುವ ಮೂಲಕ ಮಕ್ಕಳ ಕಲಿಕೆ ಮತ್ತು ಕೈಬರಹ ಸುಧಾರಣೆಗೆ ಕ್ರಮ ಜರುಗಿಸಿರುವದು ಮಕ್ಕಳ ಬಗೆಗಿನ ಕಾಳಜಿಯನ್ನು ಅಭಿವ್ಯಕ್ತಗೊಳಿಸುತ್ತದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಕಲಾವತಿ ಕೆಂಚರಾಹುತ್, ವಿನಯ ಚಿಕ್ಕಟ್ಟಿ ಐಸಿಎಸ್ಇ ಸ್ಕೂಲ್ನ ಉಪಪ್ರಾಚಾರ್ಯೆ ಶೋಭಾ ಸ್ಥಾವರಮಠ ಕೈಬರಹ ಸುಧಾರಣಾ ತರಬೇತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಭಾರತೀಯ ಶಿಕ್ಷಣ ಸಂಸ್ಥೆಯ ಸದಸ್ಯ ರಾಜು ಅಡಕೆ, ಕೈಬರಹ ಸುಧಾರಣಾ ತರಬೇತುದಾರರಾದ ಲೀಲಾ ಪಾಟೀಲ, ಬಿಪಿನ್ ಚಿಕ್ಕಟ್ಟಿ ಇಂಗ್ಲೀಷ್ ಸ್ಕೂಲ್ನ ಉಪಪ್ರಾಚಾರ್ಯರಾದ ರಿಯಾನ್ ಮುಲ್ಲಾ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಿಕ್ಷಕಿ ಅಲ್ಕೋಡ ಪ್ರಾರ್ಥಿಸಿದರು, ವೆಂಕಟೇಶ ರಾವ್ ಸ್ವಾಗತಿಸಿದರು, ಕೀರ್ತಿ ಹಾಗೂ ನಿಕಿತಾ ನಿರೂಪಿಸಿದರು. ಆಶಾಭೀ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕಟ್ಟಿ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಎಸ್.ವೈ. ಚಿಕ್ಕಟ್ಟಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಅವಶ್ಯಕ ಎಲ್ಲ ಕ್ರಮಗಳನ್ನು ಸಂಸ್ಥೆ ಕೈಗೊಳ್ಳುತ್ತಿದೆ. ಈ ಮಾಲಿಕೆಯಲ್ಲಿ ಕೈಬರಹ ಸುಧಾರಣೆ ತರಬೇತಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಾಲ್ಕೇ ದಿನಗಳಲ್ಲಿ ಮಕ್ಕಳು ಬರಹ ಶೈಲಿಯಲ್ಲಿ ಸಾಕಷ್ಟು ಗುಣಾತ್ಮಕತೆಯನ್ನು ಅಳವಡಿಸಿಕೊಳ್ಳಲು ಸ್ವಯಂ ಪ್ರೇರಣೆಯಿಂದ ಮತ್ತು ಉತ್ಸುಕತೆಯಿಂದ ಮುಂದಾಗಿರುವದು ಶ್ಲಾಘನೀಯ ಎಂದರು.
Advertisement