ಬೆಂಗಳೂರು: ದಲಿತರ ಕುರಿತು ತಮಗೆ ಬದ್ಧತೆ, ಸಾಮಾಜಿಕ ಕಳಕಳಿ ಇದ್ದರೆ ದಲಿತ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು. ನಿಮಗೆ ಮಾನವೀಯತೆ ಇದ್ದರೆ, ಮೀಸಲು ಕ್ಷೇತ್ರದಿಂದ ಗೆದ್ದಿದ್ದರೆ 54 ಶಾಸಕರು ಮುಂದಿನ ವಿಧಾನಸಭಾ ಕಲಾಪಗಳಲ್ಲಿ ಭಾಗವಹಿಸಬಾರದು; ರಾಜೀನಾಮೆ ಕೊಡಿ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಆಗ್ರಹಿಸಿದರು.
ಅವರು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಪರಿಶಿಷ್ಟ ಜಾತಿ, ಪಂಗಡದ 54 ಜನ ಶಾಸಕರು ಇದ್ದಾರೆ. ಶಿಕ್ಷಣದಲ್ಲಿ ಕ್ರಾಂತಿ ಆಗಿದೆ. ಆದರೆ, ಈ 54 ಜನರು ಮಾತನಾಡುತ್ತಿಲ್ಲ. ಮಂತ್ರಿಗಳು ಸಚಿವ ಸಂಪುಟ ಸಭೆಯಲ್ಲಿ ಮಾತನಾಡುವುದಿಲ್ಲ. ಯಾಕೆ ನೀವು ಸಚಿವ ಸ್ಥಾನದಲ್ಲಿ ಇದ್ದೀರಿ ಕೇಳಿದರು. ನಾವು ಹೋರಾಟದ ಕಡೆ ಹೆಜ್ಜೆ ಇಡಲಿದ್ದೇವೆ ಎಂದು ಪ್ರಕಟಿಸಿದರು. ರಾಜ್ಯದ ಮುಖ್ಯಮಂತ್ರಿಗಳೂ ರಾಜೀನಾಮೆ ನೀಡಲು ಒತ್ತಾಯಿಸಿದರು.
35 ವರ್ಷ ಹೋರಾಟ ಮಾಡಿದ ಮಾದಿಗರಿಗೆ ಸಿದ್ದರಾಮಯ್ಯನವರು ತಿರುಪತಿ ನಾಮ ಇಟ್ಟಿದ್ದಾರೆ ಎಂದರಲ್ಲದೇ, ರಾಜ್ಯದ ಇಡೀ ದಲಿತರಿಗೆ ಚೆಂಬು ಕೊಟ್ಟಿದ್ದಾರೆ ಎಂದು ಟೀಕಿಸಿದರು. ಒಳ ಮೀಸಲಾತಿ ವಿಚಾರದಲ್ಲಿ 101 ಜಾತಿಗೂ ಸಿದ್ದರಾಮಯ್ಯನವರು ಚೆಂಬು ಕೊಟ್ಟಿರುವುದಾಗಿ ದೂರಿದರು. ಉದ್ಯೋಗಾಕಾಂಕ್ಷಿ ಯುವಜನರ ಕಿವಿಗೆ ಚೆಂಡು ಹೂವನ್ನು ಇಟ್ಟಿದ್ದಾರೆ ಎಂದು ಆರೋಪಿಸಿದರು.
ತಮಿಳುನಾಡು ರಾಜ್ಯವು ಆರ್ಟಿಕಲ್ 9ರಡಿ ಸೇರಿ ಶೇ 69 ಮೀಸಲಾತಿ ಕೊಡುತ್ತಿದೆ. ತೊಡೆ ತಟ್ಟಿ ಆ ರಾಜ್ಯದ ಶೋಷಿತ ವರ್ಗಕ್ಕೆ ಮೀಸಲಾತಿ ನೀಡಿದೆ. ನಿಮಗೆ ಒಳ ಮೀಸಲಾತಿ ಬಗ್ಗೆ ಹೈಕೋರ್ಟ್, ಸುಪ್ರೀಂ ಕೋರ್ಟಿನಲ್ಲಿ ಹೇಗೆ ವಾದ ಮಾಡಬೇಕೆಂದು ಗೊತ್ತಿಲ್ಲದೇ ಅಲ್ಲ. ನಿಮಗೆ ಅದರ ಬಗ್ಗೆ ಆಸಕ್ತಿ ಇಲ್ಲ ಎಂದು ಆಕ್ಷೇಪಿಸಿದರು. ಸಮೀಕ್ಷೆ, ಆಯೋಗದ ವರದಿಗಳಿಗೆ ಹಣ ಖರ್ಚು ಮಾಡಿದ್ದೀರಿ. ಇದೇನು ನಿಮ್ಮಪ್ಪನ ದುಡ್ಡೇ ಎಂದು ಪ್ರಶ್ನಿಸಿದರು. ಯಾರ ಓಲೈಕೆಗೆ ಈ ರಾಜಕಾರಣ ಮಾಡುತ್ತ ಇದ್ದೀರಿ ಎಂದು ಕೇಳಿದರು.
ಸುಪ್ರೀಂ ಕೋರ್ಟಿನ ತೀರ್ಪು ಬಂದು ಒಂದು ವರ್ಷ ಕಳೆದರೂ ಈ ರಾಜ್ಯ ಸರಕಾರ ಒಳಮೀಸಲಾತಿ ಕುರಿತು ಚರ್ಚಿಸಿಲ್ಲ ಎಂದು ಟೀಕಿಸಿದರು. ನ್ಯಾ. ಸದಾಶಿವ ಅವರ, ಮಾಧುಸ್ವಾಮಿ ಅವರ ವರದಿಯನ್ನು ತಿರಸ್ಕರಿಸಿದ್ದರು. ನ್ಯಾ. ನಾಗಮೋಹನ್ದಾಸ್ ಅವರ ವರದಿಯನ್ನೂ ತಿರಸ್ಕರಿಸಿ ಒಳಮೀಸಲಾತಿಯಲ್ಲಿ ಗೊಂದಲ ಸೃಷ್ಟಿಸಿದ್ದರು. ಹೈಕೋರ್ಟಿನಲ್ಲಿ ಕೇಸ್ ದಾಖಲಾಗಿತ್ತು. ಬಳಿಕ ಸದನದಲ್ಲಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದು, ರಾಜ್ಯಪಾಲರಿಗೆ ಕಳಿಸಿದ್ದರು ಎಂದರು.



