ಚೆನ್ನೈ:- ರಾಜ್ಯದ ಜನರು ಸಾಧ್ಯವಾದಷ್ಟು ಬೇಗ ಮಕ್ಕಳು ಮಾಡಿಕೊಳ್ಳಿ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮನವಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಸ್ಥಾನಗಳನ್ನು ಪುನರ್ ವಿಂಗಡಿಸಿದರೆ ಅದು ತಮಿಳುನಾಡಿಗೆ ಹಾನಿ ಮಾಡಬಹುದು. ರಾಜ್ಯದಲ್ಲಿ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸುವುದರ ಪರಿಣಾಮಗಳನ್ನು ರಾಜ್ಯವು ಅನುಭವಿಸಬೇಕಾಗಬಹುದು. ಹೀಗಾಗಿ ರಾಜ್ಯದ ಜನರು ಸಾಧ್ಯವಾದಷ್ಟು ಬೇಗ ಮಕ್ಕಳು ಮಾಡಿಕೊಳ್ಳಿ ಎಂದರು.
ಈ ಹಿಂದೆ ನಾವು ಕಡಿಮೆ ಮಕ್ಕಳನ್ನು ಹೆರಬೇಕೆಂದು ಹೇಳುತ್ತಿದ್ದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಈಗ ತಕ್ಷಣ ಮಕ್ಕಳನ್ನು ಹೆರಬೇಕೆಂದು ಹೇಳುವಂತಾಗಿದೆ. ಕೇಂದ್ರ ಸರ್ಕಾರ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಿದರೆ, ತಮಿಳುನಾಡಿನಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಮತ್ತು ಸಂಸತ್ತಿನಲ್ಲಿ ರಾಜ್ಯದ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂದು ಹೇಳಿದರು.
ಕ್ಷೇತ್ರ ಪುನರ್ವಿಂಗಡಣೆ ವಿಷಯದ ಕುರಿತು ಮಾರ್ಚ್ 5 ರಂದು ಸರ್ವಪಕ್ಷಗಳ ಸಭೆ ಕರೆದಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಸಭೆಯಲ್ಲಿ ಭಾಗವಹಿಸುವಂತೆ ಸಿಎಂ ಮನವಿ ಮಾಡಿದರು ಮತ್ತು ಕ್ಷೇತ್ರ ಪುನರ್ವಿಂಗಡಣೆ ವಿಷಯವು ತಮಿಳುನಾಡಿಗೆ ಬಹಳ ಮುಖ್ಯವಾಗಿದೆ ಎಂದರು.



