ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯ ಸ್ಮರಣೋತ್ಸವ ಜುಲೈ 13ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಆನಂದರಾವ ಸರ್ಕಲ್ನ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸಮಸ್ತ ಶ್ರೀ ಶರಣರ ಬಳಗ ಬೆಂಗಳೂರು ಅವರ ಸಹಯೋಗದಲ್ಲಿ ಜರುಗುವುದು.
ಸುಕ್ಷೇತ್ರ ಬಳಗಾನೂರಿನ ಪರಮಪೂಜ್ಯ ಶ್ರೀ ಶಿವಶಾಂತವೀರ ಶರಣರು ಪಾವನ ಸನ್ನಿಧಾನ ವಹಿಸುವರು. ಬೆಂಗಳೂರಿನ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದ ಅವರು ಸಮಾರಂಭವನ್ನು ಉದ್ಘಾಟಿಸುವರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಳಕಲ್ಲನ ಡಾ. ಶಂಭು ಬಳಿಗಾರ ವಿಶೇಷ ಉಪನ್ಯಾಸ ನೀಡುವರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಕನಕಗಿರಿಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ವಿಜಯಕುಮಾರ ಮರಿಯಪ್ಪ ಭತ್ತದ ಶಿವಮೊಗ್ಗ ಇವರಿಗೆ ಗೌರವ ಸಮ್ಮಾನ ಜರುಗುವುದು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಗೌರವ ಉಪಾಧ್ಯಕ್ಷ, ಕೇಂದ್ರ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ, ವಿಧಾನಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಬಿ.ಎಂ. ಭತ್ತದ ಹಾಗೂ ಸಮಸ್ತ ಶರಣ ಬಳಗದ ಸರ್ವ ಪದಾಧಿಕಾರಿಗಳು ಉಪಸ್ಥಿತರಿರುವರು.
ಬೆಂಗಳೂರಿನ ವೆ.ಚಿ. ಅರುಣಕುಮಾರ ಹಾಗೂ ಕಲಾತಂಡದವರಿಂದ ಭಕ್ತಿ ಸಂಗೀತ ಜರುಗುವುದು. ಬೆಂಗಳೂರಿನ ಜಯಶರಣ ಸಲ್ಯೂಷನ್ಸ್ನ ಅನ್ನದಾನಿ ಹಿರೇಮಠ ಅವರಿಂದ ಪ್ರಸಾದದ ಭಕ್ತಿ ಸೇವೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.