ವಿಜಯಸಾಕ್ಷಿ ಸುದ್ದಿ, ಧಾರವಾಡ : ಕೆಎಸ್ಆರ್ಟಿಸಿ ಚಾಲಕ, ಧಾರವಾಡ ನಿವಾಸಿ ಮಂಜುನಾಥ ಮಡಿವಾಳ ಎಂಬುವವರು ತಮ್ಮ ಕಾರ್ನಲ್ಲಿ ಪ್ರಯಾಣಿಸುವಾಗ ಜೋಯಿಡಾ ತಾಲೂಕಿನ ಅನ್ಮೋದ ಆರ್.ಟಿ.ಓ. ಚೆಕ್-ಪೋಸ್ಟ್ ಹತ್ತಿರ ಅಪಘಾತಕ್ಕೀಡಾಗಿ ಕಾರಿಗೆ ಜಖಂ ಆಗಿತ್ತು. ಈ ಬಗ್ಗೆ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ವಾಹನವನ್ನು ಧಾರವಾಡದ ಮೈಸೂರ ಗ್ಯಾರೇಜ್ಗೆ ರಿಪೇರಿಗಾಗಿ ಬಿಟ್ಟಿದ್ದರು.
ನಂತರ ಅದರ ರಿಪೇರಿಯ ಖರ್ಚಿನ ಎಲ್ಲ ದಾಖಲೆಗಳನ್ನು ಎದುರುದಾರ ಎಚ್ಡಿಎಫ್ಸಿ ವಿಮಾ ಕಂಪನಿಗೆ ನೀಡಿ ವಿಮಾ ಹಣ ಕೊಡುವಂತೆ ಕೇಳಿದ್ದರು. ಆದರೆ ವಿಮಾ ಕಂಪನಿಯವರು ದೂರುದಾರರ ವಿಮಾ ಕ್ಲೇಮನ್ನು ಕೊಟ್ಟಿರಲಿಲ್ಲ. ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಆ ಬಗ್ಗೆ ವಿಮಾ ಕಂಪನಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ದೂರುದಾರರು ರೂ.9,079/- ಪ್ರೀಮಿಯಮ್ ಹಣ ಕಟ್ಟಿ ಎದುರುದಾರ ವಿಮಾ ಕಂಪನಿಯಿಂದ ಪಾಲಿಸಿ ಪಡೆದಿದ್ದಾರೆ. ವಾಹನ ಅಪಘಾತ ದಿನದಂದು ಆ ಪಾಲಿಸಿ ಚಾಲ್ತಿಯಿರುತ್ತದೆ. ಅಪಘಾತದಂತಹ ಸಂದರ್ಭಗಳಲ್ಲಿ ವಾಹನಕ್ಕೆ ಆಗಬಹುದಾದ ನಷ್ಟ ಪರಿಹಾರಕ್ಕಾಗಿ ವಿಮಾ ಮಾಡಿಸಲಾಗುತ್ತದೆ. ಆದರೆ ಎದುರುದಾರ ವಿಮಾ ಕಂಪನಿಯವರು ಎಲ್ಲ ದಾಖಲೆಗಳನ್ನು ಕೊಟ್ಟರೂ ದೂರುದಾರರ ವಿಮಾ ಹಣಕೊಡದೇ ಇರುವುದು ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ವಿಮಾ ಪಾಲಿಸಿ ನಿಯಮದಂತೆ ದೂರುದಾರರ ಕಾರಿಗೆ ಆಗಿರುವ ರೂ.3 ಲಕ್ಷ ಪರಿಹಾರ ಕೊಡುವಂತೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ರೂ.10,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆಯೋಗ ವಿಮಾ ಕಂಪನಿಗೆ ನಿರ್ದೇಶಿಸಿದೆ.