ವಿಜಯಸಾಕ್ಷಿ ಸುದ್ದಿ, ರೋಣ : ಅಮರಗೋಳ ಹಾಗೂ ಬಸರಕೋಡ ಗ್ರಾಮಗಳಲ್ಲಿ ಹಕ್ಕುಪತ್ರ ವಿತರಣೆಯಲ್ಲಿ ತಾರತಮ್ಯವಾಗಿದ್ದು, ಇದನ್ನು ಸರಿಪಡಿಸಿ ಎಂದು ಕೇಳಲು ಬಂದ ದಲಿತ ಮುಖಂಡರಿಗೆ ತಹಸೀಲ್ದಾರ್ ನಾಗರಾಜ ಕೆ ಅವರು ಕಚೇರಿಯಿಂದ ಹೊರ ನಡೆಯಿರಿ ಎಂದಿದ್ದು ಪ್ರಮಾಣದ ಗದ್ದಲಕ್ಕೆ ಕಾರಣವಾದ ಘಟನೆ ಶುಕ್ರವಾರ ನಡೆಯಿತು.
ದಲಿತ ಮುಖಂಡ ಡಿ.ಜೆ. ಕಟ್ಟಿಮನಿ ಅಮರಗೋಳ ಹಾಗೂ ಬಸರಕೋಡ ಗ್ರಾಮಗಳಲ್ಲಿ ಹಕ್ಕುಪತ್ರ ವಿತರಣೆಯಲ್ಲಿ ತಾರತಮ್ಯವಾಗಿರುವ ಕುರಿತು ಈ ಹಿಂದೆ ಎಸ್ಪಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿಂದೆ ಇದ್ದ ತಹಸೀಲ್ದಾರರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದರು. ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಈ ಬಗ್ಗೆ ವರದಿ ನೀಡಿ ಎಂದು ತಹಸೀಲ್ದಾರ ನಾಗರಾಜ ಕೆ ಅವರನ್ನು ಪ್ರಶ್ನಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ತಹಸೀಲ್ದಾರರು ದಲಿತ ಮುಖಂಡರಿಗೆ ಕಚೇರಿಯಿಂದ ಹೊರನಡೆಯುವಂತೆ ಸೂಚಿಸಿದರೆಂಬ ಆಪೋಪವಿದೆ.
ತಾಲೂಕಿನಲ್ಲಿ ಆಕ್ರಮ ದಂಧೆಗಳು ವ್ಯಾಪಕವಾಗಿ ನಡೆಯುತ್ತಿದ್ದರೂ, ಅವರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗದೆ ತಹಸೀಲ್ದಾರರು ನಮ್ಮಂತಹ ದಲಿತರ ಮೆಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಸೋಮವಾರ ವರದಿ ನೀಡದಿದ್ದರೆ ಮಂಗಳವಾರ ಪ್ರತಿಭಟನೆ ಮಾಡುತ್ತೇವೆ ಎಂದು ಡಿ.ಜೆ. ಕಟ್ಟಿಮನಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡ ಪ್ರಕಾಶ ಹೊಸಳ್ಳಿ ಮಾತನಾಡಿ, ನಿಮಗೆ ದಲಿತರ, ಬಡವರ ಕೂಗು ಕೇಳುತ್ತಿಲ್ಲವೇ ಎಂದು ತಹಸೀಲ್ದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ವರದಿ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸುತ್ತಿದ್ದಂತೆ ತಹಸೀಲ್ದಾರ್ ನಾಗರಾಜ ಕೆ, ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಪ್ರಕಾಶ ಜಿಗಳೂರ, ದುರಗಪ್ಪ ಮಾದರ, ಮಂಜುನಾಥ ಬುರಡಿ, ಸಂಗಪ್ಪ ಹೊಸಮನಿ, ಅಭಿಷೇಕ ಕೊಪ್ಪದ ಸೇರಿದಂತೆ ದಲಿತ ಮುಖಂಡರು ಉಪಸ್ಥಿತರಿದ್ದರು.
ಅವರು ಮೊದಲು ಬಂದಿದ್ದು ಬೇರೆ ಕೆಲಸದ ಉದ್ದೇಶಕ್ಕೆ. ಅವರ ಮನವಿ ಸ್ವೀಕರಿಸಿ ಸ್ವೀಕೃತಿಯನ್ನು ನೀಡಿದ್ದೇವೆ. ನಂತರ ಅವರು ಹಕ್ಕುಪತ್ರದ ವಿಷಯವನ್ನು ಕೇಳಿದಾಗ ಮನವರಿಕೆ ಮಾಡಿದ್ದೇನೆ. ಆದರೂ ಸಹ ಅವರು ಪದೇ ಪದೇ ಇದೇ ವಿಚಾರವಾಗಿ ಪ್ರಶ್ನಿಸಿದಾಗ ಕೆಲಸಕ್ಕೆ ಅಡ್ಡಿಪಡಿಸದೇ ಹೊರಹೊಗಿ ಎಂದು ಹೇಳಿದ್ದೇನೆ.
– ನಾಗರಾಜ ಕೆ.
ತಹಸೀಲ್ದಾರರು, ರೋಣ.