ಭಕ್ತರ ಒತ್ತಾಯದ ಮೇರೆಗೆ ಶ್ರೀಗಳ ಸ್ಪರ್ಧೆ : ಮಹಾಂತೇಶ ದಶಮನಿ

0
dingaleshwara
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶಿರಹಟ್ಟಿಯ ಜ.ಫ. ದಿಂಗಾಲೇಶ್ವರ ಸ್ವಾಮೀಜಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದರಲ್ಲಿ ತಪ್ಪೇನಿದೆ? ಅಲ್ಲಿಯ ಭಕ್ತರ ಒತ್ತಾಯದ ಮೇರೆಗೆ ಶ್ರೀಗಳು ಚುನಾವಣೆಯಲ್ಲಿ ಸ್ಪರ್ಧೆ ಬಯಸಿದ್ದಾರೆ. ಸಂವಿಧಾನದಲ್ಲಿ ಮಠಾಧೀಶರು ಚುನಾವಣೆಗೆ ನಿಲ್ಲಬಾರದು ಎನ್ನುವ ಉಲ್ಲೇಖವೇನೂ ಇಲ್ಲ. ಹೀಗಾಗಿ ದಿಂಗಾಲೇಶ್ವರ ಶ್ರೀ ಪೀಠತ್ಯಾಗ ಮಾಡುವಂತಹ ತಪ್ಪೇನೂ ಮಾಡಿಲ್ಲ ಎಂದು ಶಿರಹಟ್ಟಿಯ ಜ.ಫಕೀರೇಶ್ವರ ಮಠದ ಭಕ್ತ ಮಹಾಂತೇಶ ದಶಮನಿ ಹೇಳಿದರು.

Advertisement

ಅವರು ಶನಿವಾರ ಜ.ಫಕೀರೇಶ್ವರ ಮಠದಲ್ಲಿ ಭಕ್ತರ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕುಮ್ಮಕ್ಕಿನಿಂದ ಬಿಜೆಪಿ ಪಕ್ಷದವರು ಭಕ್ತರ ಸಭೆ ಎಂದು ಬಿಂಬಿಸಿದ್ದಾರೆ. ಯಾವ ಭಕ್ತರಿಗೂ ಹೇಳಿಲ್ಲ. ಇದೊಂದು ಬಿಜೆಪಿ ಸುದ್ದಿಗೋಷ್ಠಿ ಆಗಿದೆ. ಕಾವಿ ತೆಗೆಯಿರಿ ಎಂದು ಕೆಲವರು ಹೇಳಿದ್ದು ನಿಮ್ಮ ಕೆಲಸಗಳಿಗೆ ಶ್ರೀಗಳನ್ನು ಬಳಸಿಕೊಂಡಾಗ ಅದು ರಾಜಕೀಯವಾಗುವದಿಲ್ಲವೇ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪೀಠತ್ಯಾಗ ಮಾಡುವಂತೆ ಕೆಲವರು ಒತ್ತಾಯಿಸಿರುವುದು ಸರಿಯಲ್ಲ. ದಿಂಗಾಲೇಶ್ವರ ಶ್ರೀಗಳು ಶಿರಹಟ್ಟಿಯ ಸಂಸ್ಥಾನಮಠದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಉತ್ತರಾಧಿಕಾರಿಯಾದ ಮರುದಿನವೇ ಬಡ ಮಕ್ಕಳಿಗೆ ಉಚಿತ ವಸತಿ ಸೌಲಭ್ಯವನ್ನು ಕಲ್ಪಿಸಿ ಇಂದಿಗೂ ಅವರನ್ನು ಸಲಹುತ್ತಿದ್ದಾರೆ. 2 ಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಭಾವೈಕ್ಯ ಸಿರಿ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಸವಣೂರ ಶ್ರೀಮಠದಲ್ಲಿ ಕಲ್ಯಾಣ ಮಂಟಪ ನಿರ್ಮಾಣ, ಸಂಶಿ ಗ್ರಾಮದಲ್ಲೂ ವಾಣಿಜ್ಯ ಮಳಿಗೆ ನಿರ್ಮಾಣ, ಬೆಳ್ಳಟ್ಟಿಯಲ್ಲಿ ನೂತನವಾಗಿ ಪ್ರೌಢಶಾಲೆಯ ಕಟ್ಟಡಗಳ ನಿರ್ಮಾಣ ಹೀಗೆ ಹತ್ತು ಹಲವು ಅಭಿವೃದ್ಧಿ ಕೆಲಸಗಳಲ್ಲಿ ನಿರತರಾಗಿರುವ ಶ್ರೀಗಳ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಆದ್ದರಿಂದ ಶ್ರೀಮಠದ ಸದ್ಭಕ್ತರು ಇಂತಹ ಯಾವುದೇ ಉಹಾಪೋಹಗಳಿಗೆ ಕಿವಿಗೊಡಬಾರದು. ಅವರು ಪೀಠತ್ಯಾಗವನ್ನು ಮಾಡಬಾರದು. ಜ.ಫ.ಸಿದ್ದರಾಮ ಶ್ರೀಗಳ ಆಶೀರ್ವಾದದಿಂದ ಅವರು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ. ನಾವೆಲ್ಲರೂ ಅವನ್ನು ಬೆಂಬಲಿಸೋಣ ಎಂದರು.

ಪ.ಪಂ ಮಾಜಿ ಉಪಾಧ್ಯಕ್ಷ ಚಾಂದಸಾಬ ಮುಳಗುಂದ, ಶಿವನಗೌಡ ಪಾಟೀಲ (ಅಜ್ಜು), ಜಗದೀಶ ಇಟ್ಟೇಕಾರ, ಬಸವರಾಜ ಕಂಬಳಿ ಮುಂತಾದವರು ಉಪಸ್ಥಿತರಿದ್ದರು.

ಪಟ್ಟಣ ಪಂಚಾಯತ ಮಾಜಿ ಉಪಾಧ್ಯಕ್ಷ ಸಂತೋಷ ಕುರಿ ಮಾತನಾಡಿ, ದಿಂಗಾಲೇಶ್ವರ ಸ್ವಾಮೀಜಿ ಪೀಠತ್ಯಾಗ ಮಾಡುವಂತಹ ಯಾವ ತಪ್ಪನ್ನು ಮಾಡಿಲ್ಲ. ಶ್ರೀಮಠಕ್ಕೆ ಉತ್ತರಾಧಿಕಾರಿಯಾಗಿ ಬಂದ ಮೇಲೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಈ ಭಾಗದಲ್ಲಿ ಬಡ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ನರ್ಸಿಂಗ್ ಕಾಲೇಜ್ ಪ್ರಾರಂಭಿಸುವುದಕ್ಕೆ ಈಗಾಗೇ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ದೆಹಲಿಯ ಕೆಂಪುಕೋಟೆಯ ಮೇಲೆ ಶಿರಹಟ್ಟಿ ಮಠದ ಪರಂಪರೆಯನ್ನು ಕೊಂಡೊಯ್ಯುವ ನಿರ್ಧಾರ ಮಾಡಿದ ಶ್ರೀಗಳು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ. ಶ್ರೀಮಠದಲ್ಲಿ ನಿರಂತರವಾಗಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುತ್ತವೆ ಎಂದರು.

 


Spread the love

LEAVE A REPLY

Please enter your comment!
Please enter your name here