ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಬದ್ಧತೆಯೊಂದಿಗೆ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ. ದೈಹಿಕವಾಗಿ ಆರೋಗ್ಯ ಸದೃಢತೆಗೆ ಕ್ರಿಡೆಗಳು ಸಹಕಾರಿ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಗದಗ ರಾಜೀವಗಾಂಧಿ ನಗರದ ಉರ್ದು ಸರ್ಕಾರಿ ಶಾಲೆಯ ಮಕ್ಕಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ನಾಯಕತ್ವ ಗುಣ, ಸಹಯೋಗದ ಕೌಶಲ್ಯದ ಜೊತೆಗೆ ಜೀವನದಲ್ಲಿ ಸೋಲು-ಗೆಲುವನ್ನು ಏಕಮುಖವಾಗಿ ತಗೆದುಕೊಳ್ಳಬೇಕು ಎಂಬುದನ್ನು ಕ್ರೀಡೆಗಳು ತಿಳಿಸುತ್ತವೆ. ವಿಶೇಷಚೇತನ ಮಕ್ಕಳನ್ನು ಸಮನ್ವಯಗೊಳಿಸಿ ಅವರನ್ನೊಳಗೊಂಡು ಶಾಲಾ ಕ್ರೀಡೆಗಳು ನಡೆಯಲಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉರ್ದು ಸಿ.ಆರ್.ಪಿ ಕಲೀದ್ ಅಹಮದ್ ಜಲಗೇರಿ ವಿಶೇಷ ಚೇತನರ ಪರಿಸರ ನಿರ್ಮಾಣ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಿಗೆ ಗಟ್ಟಿ ನಿರ್ಧಾರಗಳನ್ನು ತಗೆದುಕೊಳ್ಳುವ ಉತ್ತಮ ಕೌಶಲ್ಯ, ಆತ್ಮವಿಶ್ವಾಸ ಮೂಡಿಸುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಶಿಕ್ಷಕ ಐ.ಬಿ. ಗಾಡಗೋಳಿ ಮಾತನಾಡಿ, ಆಟ-ಪಾಠಗಳು ಮಕ್ಕಳಲ್ಲಿ ಕಲಿಕಾಸಕ್ತಿಯನ್ನು ಹೆಚ್ಚಿಸುತ್ತವೆ. ಅಭಿರುಚಿಗೆ ಅನುಗುಣವಾಗಿ ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಕಲಿಕೆಯಲ್ಲಿ ಪ್ರಗತಿ ಕಂಡುಬರುತ್ತದೆ ಎಂದರು.
ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯೆ ಖೈರುನ್ನಿಸಾ ದಾವಲಖಾನ ವಹಿಸಿದ್ದರು. ಎನ್.ಎಚ್. ಜಕ್ಕಲಿ ಸ್ವಾಗತಿಸಿದರು. ಹೆಚ್.ಬಿ. ಮಕಾನದಾರ ನಿರೂಪಿಸಿದರು. ಎಸ್.ಎಸ್. ಬಳ್ಳಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಪಿಳ್ಳೆ, ಸಹಾಯಕಿ ಶಕೀಲಾ ನದಾಫ್, ಬಸವಣ್ಣೆವ್ವ ಮುಳ್ಳಾಳ, ನೀಲವ್ವ ರೊಟ್ಟಿ, ಗೀತಾ ಸಾಲಿಮಠ, ರಾಹೀಲಾ ಹೊಸಳ್ಳಿ ಮುಂತಾದವರು ಉಪಸ್ಥಿತರಿದ್ದರು.