ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ಭರಮದೇವರ ಸರ್ಕಲ್ವರೆಗೆ ಪುರಸಭೆಯ 15ನೇ ಹಣಕಾಸಿನಲ್ಲಿ ನಡೆಯುತ್ತಿರುವ ಕಾಮಗಾರಿ ತಿಂಗಳುಗಳಿಂದ ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು ಎಂದು ಶನಿವಾರ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ ಅವರನ್ನೊಳಗೊಂಡು ಸಾರ್ವಜನಿಕರು ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತನಾಡಿದ ಮಂಜುನಾಥ ಮಾಗಡಿ, ಕಳಪೆ ಗುಣಮಟ್ಟದ ಮಣ್ಣನ್ನು ಹಾಕಲಾಗಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಕಳಪೆ ಮಣ್ಣನ್ನೇ ಗುಣಮಟ್ಟದ ಮಣ್ಣೆಂದು ತಪ್ಪು ವರದಿ ಮಾಡಿಸಿ ಜನರ ಕಣ್ಣಿಗೆ ಮಣ್ಣೆರಚುತ್ತ ಗುತ್ತಿಗೆದಾರರ ಶ್ರೀರಕ್ಷೆಗೆ ನಿಂತಿದ್ದೀರಿ. ಈಗಾಗಲೇ ಅರ್ಧಕ್ಕೆ ನಿಂತಿರುವ ಕಾಮಗಾರಿ ಪೂರ್ಣಗೊಳಿಸಿ ಮುಂದುವರೆದ ಕಾಮಗಾರಿ ಪ್ರಾರಂಭಿಸಿದರೆ ಸಾರ್ವಜನಕರಿಗೆ ಅನಕೂಲವಾಗುತ್ತದೆ. ಕಳಪೆ ಕಾಮಗಾರಿ ವಿರೋಧಿಸುವವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ತಿಂಗಳುಗಳಿಂದ ಅರ್ಧಕ್ಕೆ ನಿಂತಿರುವ ಮುಖ್ಯ ಬಜಾರ್ ರಸ್ತೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು ಮತ್ತು ಅದು ಗುಣಮಟ್ಟದಿಂದ ಕೂಡಿರಬೇಕು. ಇಲ್ಲದಿದ್ದರೆ ಸಾರ್ವಜನಿಕರೊಡಗೂಡಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಈ ವೇಳೆ ಹಿರಿಯ ಆರೋಗ್ಯ ನೀರೀಕ್ಷಕ ಮಂಜುನಾಥ ಮುದಗಲ್, ಮಲ್ಲಿಕಾರ್ಜುನ ಅಂಕಲಿ ಸೇರಿ ಅಟೋ ಚಾಲಕರು, ಸಾರ್ವಜನಿಕರು ಇದ್ದರು.