ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕವನ ರಚನೆ ಮಾಡುವುದು ಅತ್ಯಂತ ಕ್ಲಿಷ್ಟಕರ ಕಾರ್ಯವಾಗಿದೆ ಎಂದು ನಿವೃತ್ತ ಉಪನ್ಯಾಸಕ ಬಿ.ಜಿ. ಯಳವಟ್ಟಿ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಗವಿಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿ ಹಾಗೂ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಕಷ್ಟು ಕವಿಗಳು ನಾಡು, ನುಡಿ, ನೆಲ, ಜಲ ಕಾಪಾಡುವ ಹಾಗೂ ನಾಡಿಗಾಗಿ ದುಡಿಯುತ್ತ, ತಮ್ಮ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಹೆಸರಾದರು. ಇಂದಿನ ಯುವಕರು, ವಿದ್ಯಾರ್ಥಿಗಳಿಗೆ ಕವಿಗೋಷ್ಠಿ ಏರ್ಪಡಿಸುವ ಮೂಲಕ ಮಕ್ಕಳಲ್ಲಿ ನಾಡು-ನುಡಿ, ನೆಲ-ಜಲ, ಭಾಷೆ ವ್ಯಕ್ತಪಡಿಸಲು, ಸಾಹಿತ್ಯಾಭಿಮಾನ ಹೆಚ್ಚಿಸಲು ಈ ಕವಿಗೋಷ್ಠಿ ಸಹಕಾರಿಯಾಗಿದೆ ಎಂದರು.
ಉಪನ್ಯಾಸಕ ಎಸ್.ಎ. ಯಳವಟ್ಟಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಯಿಂದ ನಾಡಿನಲ್ಲಿನ ಅಂಕು-ಡೊಂಕು ತಿದ್ದುವ ಮೂಲಕ ಇಂದಿಗೂ ಪ್ರಸ್ತುತರಾಗಿದ್ದಾರೆ. ಅವರ ಕವನ ಸಂಕಲನಗಳು ನಮಗೆಲ್ಲರಿಗೂ ದಾರಿದೀಪವಾಗಿವೆ. ಈ ಕವಿಗೋಷ್ಠಿಯಿಂದ ಮಕ್ಕಳಲ್ಲಿ ಸಾಹಿತ್ಯಾಭಿಮಾನ ಹೆಚ್ಚಾಗಿದೆ ಎಂದರು.
ಕವನ ವಾಚನದಲ್ಲಿ ಜ್ಯೋತಿ ನೀಲಗುಂದ ಪ್ರಥಮ, ಮಂಗಳಾ ನೀಲಗುಂದ ದ್ವಿತೀಯ, ಅಭಿಷೇಕ ಕರಿಗಾರ ತೃತೀಯ ಸ್ಥಾನ ಪಡೆದರು. ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ಮಟ್ಟಿ, ಕದಳಿ ವೇದಿಕೆ ಅಧ್ಯಕ್ಷೆ ರಾಜೇಶ್ವರಿ ಬಡ್ನಿ, ಸುಮನ ಚವಡಿ, ಹೊನ್ನಪ್ಪ ನೀಲಗುಂದ, ಪ್ರಕಾಶ ಮದ್ದಿನ, ಪ್ರಭು ಕರಿಗಾರ, ಮಹೇಶ್ ಶಿರಹಟ್ಟಿ, ಶಿವಾನಂದ ಆಪ್ತಗೇರಿ, ಮಾಹಾಂತೇಶ ನಪುರಿಮಠ, ಮಾಹಾಂತೇಶ ಮಡಿಕೇರಿ ಇದ್ದರು.



