ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಗದ ಜನರ ಮನಃಶಾಂತಿಯನ್ನು ಕದಡುವ, ಕಾಡುವ ಪ್ರಾಣಿಗಳು ಮನುಷ್ಯ ರೂಪದಲ್ಲಿಯೇ ಇವೆ. ಇನ್ನೊಬ್ಬರ ಏಳಿಗೆಯನ್ನು ಕಂಡು ಕಮರುವ, ಹೊಟ್ಟೆಕಿಚ್ಚು ಪಡುವ ಪ್ರಾಣಿ ಯಾವುದಾದರೂ ಇದ್ದರೆ ಅದು ಮನುಷ್ಯ ಮಾತ್ರ. ಆದ್ದರಿಂದ, ಇಂತಹ ಮನುಷ್ಯರ ಬಗ್ಗೆ ನಾವೆಲ್ಲ ಎಚ್ಚರದಿಂದ ಇರುವುದು ಅವಶ್ಯಕ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಸರಕಾರಿ ಶಾಲೆ ಮೈದಾನದಲ್ಲಿ ಜರುಗಿದ ಸೈಬರ್ಟೆಕ್ ಕಂಪ್ಯೂಟರ್ನ ರಜತ ಮಹೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಒಂದು ಸಂಸ್ಥೆ 25 ವರ್ಷಗಳನ್ನು ಪೂರೈಸುವುದು ಅಷ್ಟು ಸುಲಭದ ಮಾತಲ್ಲ. ಸೈಬರ್ಟೆಕ್ ಸಂಸ್ಥೆ ಇಂದು ರಜತಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ನನಗೂ ಸಂತೋಷ ನೀಡಿದೆ. ಇಂದಿನ ದಿನಗಳಲ್ಲಿ ಎಲ್ಲವನ್ನೂ ಕಲಿತಿದ್ದರೂ ಕಂಪ್ಯೂಟರ್ನ ಜ್ಞಾನ ಅವಶ್ಯವಿದೆ. ನಿಮಗೆ ಅದನ್ನು ಕಲಿಸಲೆಂದು ಇರುವ ಈ ಸಂಸ್ಥೆಯ ಉಪಯೋಗವನ್ನು ಪಡೆದುಕೊಳ್ಳಿ ಎಂದರು.
ನಿಸರ್ಗವು ಮನುಷ್ಯನಿಗೆ ಎಲ್ಲವನ್ನೂ ಕೊಟ್ಟಿದೆ. ಅದರಿಂದ ಆತ ಪಾಠ ಕಲಿಯಬೇಕು. ಇದೊಂದು ಶಾಲೆ. ಇಲ್ಲಿ ಯಾವುದೇ ಫೀ, ಡೊನೇಷನ್ ಇಲ್ಲ. ನಿಸರ್ಗದಿಂದ ಪಾಠ ಕಲಿಯದ ಮನುಷ್ಯ ಎಲ್ಲವನ್ನೂ ಕಳೆದುಕೊಡಂತೆ. ಒಂದು ವೇಳೆ ಮನುಷ್ಯ ನಿಸರ್ಗದಿಂದ ಪಾಠ ಕಲಿಯಲು ನಿರಾಕರಿಸಿದರೆ ಅದೇ ಅವನಿಗೆ ಉತ್ತಮ ಪಾಠ ಕಲಿಸುತ್ತದೆ ಎಂದು ಶ್ರೀಗಳು ತಿಳಿಸಿದರು.
ನೇತೃತ್ವ ವಹಿಸಿದ್ದ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿದರು. ಎಸ್.ಎ. ಕಾಲೇಜಿನ ಪ್ರಾಚಾರ್ಯ ವೈ.ಸಿ. ಪಾಟೀಲರಿಗೆ ಸೈಬರ್ಟೆಕ್ ವಿದ್ಯಾರ್ಥಿಗಳಿಂದ ಗುರುವಂದನೆ ನಡೆಯಿತು. ಗುರುವಂದನೆ ಸ್ವೀಕರಿಸಿದ ಪಾಟೀಲ ಮಾತನಾಡಿದರು. ಸಮಾರಂಭದಲ್ಲಿ ಲಿಂ. ಡಾ.ಅಭಿನವ ಅನ್ನದಾನ ಮಹಾಸ್ವಾಮಿಗಳ ಪುತ್ಥಳಿಯ ತುಲಾಭಾರ ಜರುಗಿತು.
ವೇದಿಕೆಯ ಮೇಲೆ ದರಗಾದ ಶರಣರಾದ ಮಂಜೂರಹುಸೇನ್ ಶಾವಲಿ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಡಾ. ಕೆ.ಬಿ. ಧನ್ನೂರ, ರವೀಂದ್ರನಾಥ ದೊಡ್ಡಮೇಟಿ, ಡಾ. ಜಿ.ಕೆ. ಕಾಳೆ, ಬಂಡಿ ಸಿದ್ದಣ್ಣ, ಮುತ್ತಣ್ಣ ಕಡಗದ, ಶಶಿಧರ ದಿಂಡೂರ, ಕುಮಾರ ಗಡಗಿ ಮುಂತಾದವರಿದ್ದರು.
ರಾಘವೇಂದ್ರ ಕೌಜಗೇರಿ, ಅಭಿಷೇಕ ಇನಾಮದಾರ, ಎಸ್.ಬಿ. ಅಂಗಡಿ, ರೂಪಾ ಶೆಟ್ಟರ ಅನಿಸಿಕೆ ವ್ಯಕ್ತಪಡಿಸಿದರು. ನಂದೀಶ ಅಚ್ಚಿ ಸ್ವಾಗತಿಸಿದರು. ವಿರುಪಾಕ್ಷಿ ಸಂಗನಾಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಹೊನವಾಡ ನಿರೂಪಿಸಿದರು.
ಸಾನ್ನಿಧ್ಯ ವಹಿಸಿದ್ದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಮಾತನಾಡಿ, ತಂತ್ರಜ್ಞಾನವು ಮನುಕುಲಕ್ಕೆ ವರವೂ ಆಗಿದೆ, ಶಾಪವೂ ಆಗಿದೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ಕಲಿಯದ ಮನುಷ್ಯ ಯಾವುದಕ್ಕೂ ಉಪಯೋಗವಿಲ್ಲ ಎನ್ನುವಂತಾಗಿದ್ದಾನೆ. ನೀವೆಲ್ಲರೂ ಈ ಜ್ಞಾನವನ್ನು ಬೆಳೆಸಿಕೊಳ್ಳಿ ಎಂದರು.