ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಜನನ, ಮರಣ ಪ್ರಮಾಣಪತ್ರ ಶುಲ್ಕವನ್ನು 10 ಪಟ್ಟು ಏರಿಸಿರುವುದು ಸರ್ಕಾರದ ಭಂಡತನಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎಂ.ಎಂ. ಹಿರೇಮಠ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಸ್, ಪೆಟ್ರೋಲ್, ವಿದ್ಯುತ್, ಹಾಲು ಸ್ಭೆರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿ ಇದೀಗ ಜನನ, ಮರಣದಲ್ಲೂ ಹಣ ಗಳಿಸಲು ಮುಂದಾಗಿದೆ. ಜನನ, ಮರಣ ಪ್ರಮಾಣ ಪತ್ರದ ಶುಲ್ಕವನ್ನು 10 ಪಟ್ಟು ಹೆಚ್ಚಳ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿದೆ.
ಈ ಮೊದಲು ಜನನ, ಮರಣ ಪ್ರಮಾಣಪತ್ರ ಪಡೆಯಲು 5 ರೂಪಾಯಿ ಶುಲ್ಕವಿತ್ತು. ಆದರೆ ಈಗ ಅದನ್ನು 50 ರೂಪಾಯಿಗೆ ಏರಿಸಲಾಗಿದೆ. ಈ ಮೊದಲು ಒಂದು ತಿಂಗಳ ನಂತರ ಜನನ, ಮರಣ ಪ್ರಮಾಣಪತ್ರ ಪಡೆಯಲು ಯಾವುದೇ ದಂಡ ಶುಲ್ಕ ಇರಲಿಲ್ಲ. ಈಗ ಅದಕ್ಕೂ 50 ರೂಪಾಯಿ ಶುಲ್ಕವನ್ನು ವಿಧಿಸುತ್ತಿದ್ದಾರೆ.
5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಜನತೆಯ ಮೇಲೆ ಅದರ 10 ಪಟ್ಟು ವಸೂಲಿ ಮಾಡುತ್ತಿದ್ದಾರೆ. ಈ ಕೂಡಲೇ ಏರಿಸಿದ ಶುಲ್ಕವನ್ನು ಹಿಂದಕ್ಕೆ ಪಡೆದು ಮೊದಲಿನ ಶುಲ್ಕವನ್ನೇ ಮುಂದುವರೆಸಬೇಕೆಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.