ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಭಾನುವಾರ ರೋಣ ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ರೋಣ ಪಟ್ಟಣದಲ್ಲಿ ಪಂಚಮಸಾಲಿ ಯುವ ಮುಖಂಡರಾದ ಉಮೇಶ ಚನ್ನು ಪಾಟೀಲ, ಶಿವಕುಮಾರ ದಡ್ಡೂರ, ಮಲ್ಲಿಕಾರ್ಜುನ ಸಂತೋಜಿ, ವೀರಣ್ಣ ನಾಯಕ ಅವರನ್ನು ಬಂಧಿಸಿ ನರೇಗಲ್ಲ ಠಾಣೆಗೆ ಕರೆತಂದದ್ದಕ್ಕಾಗಿ ಸ್ಥಳೀಯ ಮುಖಂಡರು ನರೇಗಲ್ಲ ಠಾಣೆಯ ಮುಂಭಾಗದಲ್ಲಿ 2 ಗಂಟೆಗಳ ಕಾಲ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟಿಸಿದರು.
ಪಂಚಮಸಾಲಿ ಸಮಾಜದ ಅಧ್ಯಕ್ಷ ಮುತ್ತಣ್ಣ ಪಲ್ಲೇದ ಮಾತನಾಡಿ, ಪಂಚಮಸಾಲಿ ಸಮಾಜದ ಹೋರಾಟವನ್ನು ಪೊಲೀಸ್ ಇಲಾಖೆಯ ಮೂಲಕ ಹತ್ತಿಕ್ಕುವ ಕೆಲಸವನ್ನು ಸರಕಾರÀ ಮಾಡುತ್ತಿದೆ. ರೋಣ ನಗರದಲ್ಲಿ ಯಾವುದೇ ಪ್ರತಿಭಟನೆಗೆ ಸಮಾಜ ಕರೆ ನೀಡಿರಲಿಲ್ಲ. ಆದರೂ, ವಿನಾಕಾರಣ ನಮ್ಮ ಮುಖಂಡರನ್ನು ಬಂಧಿಸುವ ಮೂಲಕ ಸಮಾಜಕ್ಕೆ ಅಪಮಾನ ಮಾಡಲಾಗಿದೆ. ತತ್ಕ್ಷಣವೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಪ.ಪಂ ಮಾಜಿ ಅಧ್ಯಕ್ಷ ಶರಣಪ್ಪ ಕಲಾಲಬಂಡಿ, ಕಲ್ಮೇಶ ತೊಂಡಿಹಾಳ, ಮಾಜಿ ಸದಸ್ಯ ಶಶಿಧರ ಸಂಕನಗೌಡ್ರ, ಬಸವರಾಜ ಕೊಟಗಿ ಮಾತನಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಲುಪುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದು ಪ್ರತಿಭಟನಾಕಾರರ ಮನವೊಲಿಸಲು ಮುಂದಾದಂರೂ ಯಾವುದೇ ಪ್ರಯೋಜನವಾಗಲಿಲ್ಲ. ಬಂಧಿತರನ್ನು ಬಿಡುಗಡೆಗೊಳಿಸುವವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು ಎಂದರು. ಮುಖ್ಯಮಂತ್ರಿಗಳ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬಂಧಿತರನ್ನು ಬಿಡುಗಡೆಗೊಳಿಸಲಾಯಿತು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಗಂಗಾಧರ ಕೊಟಗಿ, ಅಶೋಕ ಬೇವಿನಕಟ್ಟಿ, ನಿಂಗಪ್ಪ ಕಣವಿ, ಶ್ರೀಶೈಲಪ್ಪ ಬಂಡಿಹಾಳ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಸಿದ್ದಪ್ಪ ನರಗುಂದ, ಶಾಂತಪ್ಪ ಚಿಕ್ಕೊಪ್ಪ, ವೀರಣ್ಣ ಧರಣೆಪ್ಪಗೌಡ್ರ, ರಮೇಶ ಕೋಲಕಾರ, ರುದ್ರೇಶ ಕೊಟಗಿ, ಕುಬೇರಪ್ಪ ತಮ್ಮನಗೌಡ್ರ, ಸಂತೋಷ ಮಾಳವಾಡ, ವೀರಣ್ಣ ಗುಜಮಾಗಡಿ, ರವಿ ಮುಗಳಿ ಮುಂತಾದವರಿದ್ದರು.