ವಿಜಯಸಾಕ್ಷಿ ಸುದ್ದಿ, ಗದಗ: ಕಾಶ್ಮೀರದ ಪಹಲ್ಗಾಮದಲ್ಲಿ ಯಾತ್ರಿಕರ ಮೇಲೆ ನಡೆದ ಗುಂಡಿನ ದಾಳಿಯು ಇಡೀ ಮಾನವೀಯತೆಗೆ ಮಾರಕವಾದ ದಾಳಿಯಾಗಿದೆ ಎಂದು ಯುವ ಕರ್ನಾಟಕ ಭೀಮ ಸೇನೆ ಯುವಶಕ್ತಿ ಸಂಘ ಜಿಲ್ಲಾಧ್ಯಕ್ಷ ರಾಮು ಬಾಗಲಕೋಟ್ ಖಂಡಿಸಿದರು.
ಯುವ ಕರ್ನಾಟಕ ಭೀಮ ಸೇನೆ ಯುವಶಕ್ತಿ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ನಗರದ ಕಾಟನ್ ಮಾರ್ಕೆಟ್ ರೋಡ್ನಲ್ಲಿರುವ ಕಾರ್ಮಿಕ ಕಲ್ಯಾಣ ಸಂಸ್ಥೆಯ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂತಾಪಸೂಚಕ ಸಭೆಯಲ್ಲಿ, ಈ ದುಷ್ಕೃತ್ಯದಲ್ಲಿ ಮಡಿದವರಿಗೆ ಸಂಘಟನೆಯ ಪರವಾಗಿ ಮೇಣದಬತ್ತಿ ಹಚ್ಚಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ಶಹರ ಘಟಕದ ಅಧ್ಯಕ್ಷ ಶಬ್ಬೀರ್ ತಹಸೀಲ್ದಾರ ಘಟನೆಯನ್ನು ತೀವ್ರವಾಗಿ ಖಂಡಿಸಿ, ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ಭಗವಂತ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿ, ಈ ದಾಳಿಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದರು.
ಹಿರಿಯರಾದ ನಜೀರ್ ಬಳ್ಳಾರಿ ಮಾತನಾಡಿ, ಈ ಕೃತ್ಯಕ್ಕೆ ಕಾರಣರಾದವರು ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು. 29ನೇ ವಾರ್ಡಿನ ಅಧ್ಯಕ್ಷ ಖಾದರ್ ಭಾಷಾ ನವಲಗುಂದ್ ಕೃತ್ಯವನ್ನು ಖಂಡಿಸುವುದರ ಜೊತೆಗೆ ಭದ್ರತಾ ವೈಫಲ್ಯವು ಇರಬಹುದೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಒಂದನೇ ವಾರ್ಡಿನ ಅಧ್ಯಕ್ಷರಾದ ಜಬಿವುಲ್ಲಾ ಬೋಧ್ಲೆಖಾನ್ ಮಾತನಾಡಿ, ಈ ಕೃತ್ಯದಲ್ಲಿ ಭಾಗಿಯಾದ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಯಂಕಪ್ಪ ತಾಳದವರ್, ಸಾಧಿಕ ಧಾರವಾಡ, ಇಸ್ಮಾಯಿಲ್ ಶಿರವಾರ, ಸರಫ್ರಾಜ್ ನಾಯ್ಕರ್, ಫಯಾಜ್ ಕಬಾಡಿ, ರಫೀಕ್ ಹಣಗಿ, ಮೊಹಮ್ಮದ್ ರಫೀಕ್, ಇರ್ಫಾನ್ ಶಿರಹಟ್ಟಿ, ನಾಸಿರ್ ಚಿಕೇನಕೊಪ್ಪ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.