ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಸವದತ್ತಿಯ ಯಲ್ಲಮ್ಮನ ದೇವಸ್ಥಾನಕ್ಕೆ ದರ್ಶನ ಪಡೆಯಲು ಹೋದ ಸಂದರ್ಭದಲ್ಲಿ ಗದಗ ತಳಗೇರಿ ಓಣಿಯ ಮಾದಿಗ ಸಮಾಜದ ಕಟ್ಟಿಮನಿ ಕುಟುಂಬದ ವೀರೇಶ ಹಾಗೂ ಸಚಿನ್ ಎಂಬ ಇಬ್ಬರು ಮಕ್ಕಳು ನದಿಯಲ್ಲಿ ಸ್ನಾನ ಮಾಡುವಾಗ ಕಾಲುಜಾರಿ ಬಿದ್ದು ಮರಣ ಹೊಂದಿದ್ದು ದುರ್ದೈವ ಹಾಗೂ ಆಘಾತಕಾರಿ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ವಿಷಾದ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಅವರು ಕಟ್ಟಿಮನಿ ಕುಟುಂಬದವರನ್ನು ಭೇಟಿ ಮಾಡಿ, ಅವರ ತಾಯಂದಿರಾದ ಪುಷ್ಪಾ ಮರಿಯಪ್ಪ ಕಟ್ಟಿಮನಿ ಹಾಗೂ ಲತಾ ಗೋಪಾಲ ಕಟ್ಟಿಮನಿ ಇವರಿಗೆ ಸಾಂತ್ವನ ಹೇಳಿದರು. ಅಲ್ಲದೇ ಗದಗ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಸರ್ಕಾರದಿಂದ ಪರಿಹಾರ ನೀಡಲು ವಿನಂತಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ತಕ್ಷಣವೇ ಮೃತ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ಲಕ್ಷö್ಮಣ ದೊಡ್ಡಮನಿ, ಮಂಜುನಾಥ ಕೋಟ್ನಿಕಲ್, ಅಶೋಕ ಕುಡತಿನಿ, ಹುಡಚಪ್ಪ ಹಳ್ಳಿಕೇರಿ, ವಿಜಯ ಕಲ್ಮನಿ, ಪದ್ಮಿನಿ ಮುತ್ತಲದಿನ್ನಿ, ರಾಘು ಪರಾಪೂರ, ಅನಿಲ ಅಬ್ಬಿಗೇರಿ, ಶಶಿಧರ ದಿಂಡೂರ, ರಮೇಶ ಸಜ್ಜಗಾರ ಸೇರಿದಂತೆ ಸಮಾಜದ ಹಿರಿಯರು ಇದ್ದರು.