ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಕಾಶ್ಮೀರದ ಪೆಹಲ್ಗಾಮ್ದಲ್ಲಿ ಉಗ್ರರ ಗುಂಡಿಗೆ ಮೃತಪಟ್ಟ ಕನ್ನಡಿಗರಾದ ಮಂಜುನಾಥ ರಾವ್, ಭರತ್ ಭೂಷಣ್, ಮಧುಸೂದನ್ ಹಾಗೂ ಇನ್ನಿತರರಿಗೆ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಳಗುಂಡಿ ಗ್ರಾಮದ ನರೇಗಾ ಸಮುದಾಯ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರ್ಮಿಕರು ಒಂದು ನಿಮಿಷಗಳ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದರು.
ಮೌನಾಚರಣೆಗೂ ಮುನ್ನ ನರೇಗಾ ಕೂಲಿಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಕೂಲಿಕಾರ್ಮಿಕ ವಿರೇಶ ಒಲೇಕಾರ, ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡು ಹಾರಿಸಿ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಇದೊಂದು ಹೇಯ ಕೃತ್ಯವಾಗಿದ್ದು, ಇದನ್ನು ನಾವೆಲ್ಲ ಖಂಡಿಸುತ್ತೇವೆ. ಇಂತಹ ದುಷ್ಕೃತ್ಯ ಎಸಗಿದವರನ್ನು ದೇವರು ಎಂದಿಗೂ ಕ್ಷಮಿಸಲಾರ. ಅಮಾಯಕರನ್ನು ಬಲಿಪಡೆದ ಉಗ್ರರನ್ನು ಮತ್ತು ಅವರ ಹಿಂದೆ ಇರುವವರನ್ನು ನಮ್ಮ ದೇಶದ ಸೈನಿಕರು ಬಲಿಪಡೆದುಕೊಳ್ಳಬೇಕು. ಉಗ್ರರು ಬಲಿಯಾಗದ ಹೊರತು ಮೃತಪಟ್ಟ ಕುಟುಂಬಸ್ಥರಿಗೆ ಸಮಾಧಾನವಾಗಲಾರದು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಭಯೋತ್ಪಾದನೆ ನಿಗ್ರಹಕ್ಕೆ ದಿಟ್ಟ ಕ್ರಮ ಕೈಗೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಾದ ಬಸವರಾಜ ಆದಿ, ಸದಸ್ಯ ನಾಗರಾಜ ಪಾಟೀಲ್, ನರೇಗಾ ಸಿಬ್ಬಂದವರ್ಗ, ಗ್ರಾಮ ಕಾಯಕ ಮಿತ್ರ ಮಲ್ಲಮ್ಮ ಮಣ್ಣೂರ, ಗುಳಗುಳಿ ಗ್ರಾ.ಪಂ ಸಿಬ್ಬಂದಿಗಳಾದ ಮಲ್ಲಪ್ಪ ಉಪ್ಪಾರ, ಯಮನೂರ ಓಲೇಕಾರ, ನಿಂಗರಾಜ ಗುರಿಕಾರ, ಮರಲಿಂಗಪ್ಪ ಮುತಾರಿ, ನರೇಗಾ ಕೂಲಿಕಾರ್ಮಿಕರಾದ ಶರಣು ನಾಯಕ, ಭೀಮಪ್ಪ ಶಾಂತಗಿರಿ, ಲಕ್ಷ್ಮೀ ಸುಳ್ಳದ, ಯಶೋದಾ ಲಾಲಗುಂದಿ, ಕಾಳಿಂಗ ಕುಂಕದ, ಮಂಜು ಕಣಕಿ, ಮೌನೇಶ ಬಡಿಗೇರ, ಶಿವಪ್ಪ ಕುಂಕದ, ಶಿವಪ್ಪ ಲಾಲಗುಂದಿ, ಈರಮ್ಮ ವಸ್ತ್ರದ, ಶಾರವ್ವ ಓಲೇಕಾರ, ಕಸ್ತೂರೆವ್ವ ಲಾಲಗುಂದಿ ಸೇರಿದಂತೆ 400ಕ್ಕೂ ಅಧಿಕ ನರೇಗಾ ಕೂಲಿಕಾರ್ಮಿಕರು ಹಾಜರಿದ್ದರು.
ಗ್ರಾ.ಪಂ ಸದಸ್ಯರಾದ ನೀಲವ್ವ ಕುರ್ತಕೋಟಿ ಮಾತನಾಡಿ, ಕೈಲಾಗದ ಹೇಡಿಗಳು ಅಮಾಯಕರನ್ನು ಬಲಿ ಪಡೆದಿದ್ದಾರೆ. ಪಾಕಿಸ್ತಾನದ ಕುತಂತ್ರ ಬುದ್ಧಿ ಏನೆಂಬುದು ಪೆಹಲ್ಗಾಮ್ ಘಟನೆ ಮೂಲಕ ಗೊತ್ತಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕನು ಇದನ್ನು ಖಂಡಿಸುವಂತಾಗಬೇಕೆಂದು ಹೇಳಿದರು.