ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾಗಿರುವ ಕಪ್ಪತ್ತಗಿರಿಯಲ್ಲಿರುವ ಮಠದಲ್ಲಿ ಸಾಕಷ್ಟು ಗೊಂದಲಗಳಿವೆ. ಎಪ್ಪತ್ತು ಗಿರಿ ನೋಡುವುದಕ್ಕಿಂತ ಕಪ್ಪತ್ತಗಿರಿ ನೋಡಿದರೆ ಜೀವನ ಪಾವನವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಕಪ್ಪತ್ತಗುಡ್ಡದಲ್ಲಿರುವ ಕಪ್ಪತ್ತಗಿರಿಯ ಮಠದಲ್ಲಿ ಮಲ್ಲಿಕಾರ್ಜುನ ಶ್ರೀಗಳು ಹಲವು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಆರೋಪಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂ. ವಿಶ್ವನಾಥಸ್ವಾಮಿ ಕಪ್ಪತ್ತಮಠ ಇಬ್ಬರು ಮಕ್ಕಳು ಮಠ ನಡೆಸಬೇಕಾಗಿತ್ತು. ಹಣದ ಆಸೆಗಾಗಿ ಮೊದಲ ಮಗ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಎರಡನೇ ಮಗ ಶ್ರೀಕಾಂತಸ್ವಾಮಿ ನಡುವೆ ತಿಕ್ಕಾಟ ನಡೆಯುತ್ತಿದೆ. ಮೂರು ವರ್ಷದಿಂದ ಇಬ್ಬರನ್ನು ಒಂದುಗೂಡಿಸಲು ಪ್ರಯತ್ನ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಮಠದಲ್ಲಿ ಕೇಲವು ಪುಂಡರನ್ನು ಇಟ್ಟುಕೊಂಡು ಸ್ವತಃ ತಮ್ಮ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಬಾಯಿಯಿಂದ ಕಚ್ಚಿ ಗಾಯಗೋಳಿಸಿದ್ದಾರೆ ಎಂದು ಆರೋಪಿಸಿದರು.
ಮಲ್ಲಿಕಾರ್ಜುನ ಶ್ರೀಗಳು ಮಠದ ಹೆಸರಿನಲ್ಲಿ ಸಾಕಷ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ. ಭಕ್ತರಿಂದ ಬಂದ ಹಣದಿಂದ ವೈಭೋಗದ ಜೀವನ ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಕಪ್ಪತ್ತಗುಡ್ಡದಲ್ಲಿನ ಲೆಕ್ಕ ಪರಿಶೋಧನೆ ನಡೆದಿಲ್ಲ. ಹೀಗಾಗಿ ಹೊಸ ಟ್ರಸ್ಟ್ ನಿರ್ಮಾಣ ಮಾಡಲಾಗುವುದು. ಈ ಕೂಡಲೇ ಮುಂಡರಗಿ ಪೊಲೀಸರು ಕ್ರಮ ಕೈಗೊಂಡು ಸೂಕ್ತ ತನಿಖೆ ನಡೆಸಬೇಕು. ಸ್ವಾಮೀಜಿಗಳ ಈ ವರ್ತನೆಯಿಂದ ಮಠಕ್ಕೆ ಬರುವ ಭಕ್ತರು ಅಸಹಾಯಕರಾಗಿದ್ದಾರೆ. ಭಕ್ತರ ಹಿತದೃಷ್ಟಿಯಿಂದಲೂ ಮಠದಲ್ಲಿರುವ ಅವ್ಯವಸ್ಥೆ ದೂರವಾಗಬೇಕು ಎಂದು ಆಗ್ರಹಿಸಿದರು.
75ಕ್ಕೂ ಹೆಚ್ಚು ವಯಸ್ಸಾಗಿರುವ ವೃದ್ಧೆ ಲಲಿತಮ್ಮನವರ ಮೇಲೆ ಹಲ್ಲೆ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಎಸ್ಪಿಯವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ರಾಜು ಖಾನಪ್ಪನವರ ತಿಳಿಸಿದರು.
ಈ ವೇಳೆ ಮಹೇಶ್ ರೋಖಡೆ, ಕಿರಣ ಹಿರೇಮಠ, ವೆಂಕಟೇಶ ದೊಡ್ಡಮನಿ, ಕುಮಾರ ನಡಗೇರಿ, ರಾಚೋಟಿ ಕಾಡಪ್ಪನವರ, ವಿಶಾಲ ಗೋಕಾವಿ ಉಪಸ್ಥಿತರಿದ್ದರು.
ಕಪ್ಪತಗಿರಿ ಮಠದಲ್ಲಿನ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದರೆ ಅಲ್ಲಿರುವ ಕೆಲವರು ದಬ್ಬಾಳಿಕೆ ಮಾಡುತ್ತಾರೆ. ಈ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು ಮಾತ್ರ ಮಠಕ್ಕೆ ಸಂಬಧಪಡುತ್ತಾರೆ ಎನ್ನುತ್ತಾರೆ. ಹಾಗಾದರೆ ಗದಗ ಭಕ್ತರ ದೇಣಿಗೆಯನ್ನು ಸ್ವೀಕಾರ ಮಾಡುವುದೇಕೆ, ಕೇವಲ ಪಕ್ಕದ ಗ್ರಾಮದ ಭಕ್ತರ ದೇಣಿಗೆಯನ್ನಷ್ಟೇ ಸ್ವೀಕರಿಸಬಹುದಲ್ಲವೇ…
– ರಾಜು ಖಾನಪ್ಪನವರ.
ಶಿವರಾಮಕೃಷ್ಣ ಸೇವಾ ಟ್ರಸ್ಟ್ ಸಮಿತಿ.