ವಿಜಯಸಾಕ್ಷಿ ಸುದ್ದಿ, ಧಾರವಾಡ: ದಸರಾ ಮಹೋತ್ಸವ-2025ರ ಅಂಗವಾಗಿ ಮೈಸೂರಿನಲ್ಲಿ ಜರುಗಿದ ರಾಜ್ಯಮಟ್ಟದ ಸಿ.ಎಂ. ಕಪ್ ದಸರಾ ಕ್ರೀಡಾಕೂಟದಲ್ಲಿ ಅಟ್ಲೆಟಿಕ್ಸ್, ಹಾಕಿ, ವಾಲಿಬಾಲ್, ಜಿಮ್ನಾಸ್ಟಿಕ್, ಟೈಕ್ವಾಂಡೋ ಮತ್ತು ಕುಸ್ತಿ ವಿಭಾಗದಲ್ಲಿ ಒಟ್ಟು 111 ಪದಕಗಳು ಧಾರವಾಡ ಜಿಲ್ಲೆಗೆ ಲಭಿಸಿದ್ದು, ಅದರಲ್ಲಿ ಮೂರು ವಿಭಾಗ ಗುಂಪು ಸ್ಪರ್ಧೆಯಲ್ಲಿ ಟ್ರೋಫಿ ಲಭಿಸಿವೆ.
ಈ ಎಲ್ಲಾ ವಿಜೇತ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಅಭಿನಂದಿಸಿ, ಕ್ರೀಡಾಪಟುಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್. ಅಮರಾಪುರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಅಧೀಕ್ಷಕ ಸುರೇಂದ್ರ ಗಂ. ಭಾವಿಕಟ್ಟಿ, ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಶ್ರೀರಾಮ ಬುಡಕಿ, ಜಿಮ್ನಾಸ್ಟಿಕ್ ತರಬೇತುದಾರ ಬಸವರಾಜ ಪಟಾಳ್, ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


