ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿ ಮೀಸಲು ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗೆ ನಿಯೋಜನೆಗೊಂಡ ಸಹಾಯಕ ಚುನಾವಣಾಧಿಕಾರಿ ಸೇರಿದಂತೆ ಎಲ್ಲ ಸೆಕ್ಟರ್ ಆಫೀಸರ್ಗಳು ಮತ್ತು ಗ್ರಾಮ ಮಟ್ಟದಿಂದ ಹಿಡಿದು ತಾಲೂಕಾ ಮಟ್ಟದವರೆಗಿನ ಎಲ್ಲ ಸಿಬ್ಬಂದಿಗಳ ಸಹಕಾರದಿಂದ ಇತ್ತೀಚೆಗೆ ಲೋಕಸಭಾ ಚುನಾವಣೆ ಯಶಸ್ವಿಯಾಗಿ ನಡೆಯಿತು ಎಂದು ತಹಸೀಲ್ದಾರ ಅನಿಲ ಬಡಿಗೇರ ಹೇಳಿದರು.
ಅವರು ಶುಕ್ರವಾರ ಶಿರಹಟ್ಟಿಯ ಡಿ.ದೇವರಾಜು ಅರಸು ಭವನದಲ್ಲಿ ತಾಲೂಕಾಡಳಿತದ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರ ಸೂಕ್ತ ಮಾರ್ಗದರ್ಶನದಂತೆ ಸಹಾಯಕ ಚುನಾವಣಾಧಿಕಾರಿಯಾಗಿದ್ದ ಅಮಿತ್ ಬಿದರಿ ಅವರು ಮೇಲಾಧಿಕಾರಿಗಳ ಮತ್ತು ಆಯೋಗದ ನಿರ್ದೆಶನದಂತೆ ನಮಗೆ ಉತ್ತಮ ಮಾರ್ಗದರ್ಶನ ಮಾಡಿ ನಮ್ಮಿಂದ ಕೆಲಸವನ್ನು ಮಾಡಿಸಿ ಯಶಸ್ವಿಯಾದರು.
ಹಲವು ಮೂಲ ಸೌಲಭ್ಯಗಳ ಕೊರತೆ ಇದ್ದರೂ ಸಹ ಇರುವ ಸೌಕರ್ಯಗಳಲ್ಲಿಯೇ ಎಲ್ಲಿಯೂ ಲೋಪವಾಗದೇ, ಯಾವುದೇ ಅಹಿತಕರ ಘಟನೆಗಳು ಜರುಗದ ರೀತಿಯಲ್ಲಿ ಕಳೆದ ವರ್ಷದ ವಿಧಾನಸಭಾ ಮತ್ತು ಇತ್ತೀಚೆಗೆ ಜರುಗಿದ ಲೋಕಸಭಾ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದರು.
ನಂತರ ತಾಲೂಕಾಡಳಿತದ ವತಿಯಿಂದ ಸಹಾಯಕ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಅಮಿತ ಬಿದರಿ ಅವರನ್ನು ಸನ್ಮಾನಿಸಿ, ಸೆಕ್ಟರ್ ಅಧಿಕಾರಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಲಕ್ಷ್ಮೇಶ್ವರ ತಹಸೀಲ್ದಾರ ವಾಸುದೇವ ಸ್ವಾಮಿ, ಬಿಇಓ ನಾನಾಯ್ಕ, ಪ್ರಾಚಾರ್ಯ ಗಿರಿತಮ್ಮಣ್ಣವರ, ಎಂ.ಸಿ. ಭಜಂತ್ರಿ, ಎಂ.ಕೆ. ಲಮಾಣಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.