ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ಸ್ವಾತಂತ್ರ್ಯಾನಂತರ ಗಾಂಧೀಜಿಯ ಕನಸಾದ ಗ್ರಾಮ್ ಸ್ವರಾಜ್ ಯೋಜನೆ, ಸ್ವಚ್ಛತೆ ಹಾಗೂ ವ್ಯಸನಮುಕ್ತ ರಾಷ್ಟ್ರದ ಕನಸನ್ನು ನೆರವೇರಿಸಲು ಯಾವ ಸರ್ಕಾರಗಳೂ ನಿರ್ಧರಿಸಲಿಲ್ಲ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಅರವಿಂದ ಪಿ.ಎಸ್. ತಿಳಿಸಿದರು.
ಪಟ್ಟಣದ ತರಳಬಾಳು ಕಲ್ಯಾಣಮಂಟಪದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ ಗಾಂಧೀಸ್ಮೃತಿ ಮತ್ತು ಪಾನಮುಕ್ತ ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಯಾದರೆ ದೇಶವು ಅಭಿವೃದ್ಧಿ ಹೊಂದುತ್ತದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ದೇಶದ ಆರ್ಥಿಕತೆ ಮುನ್ನೆಲೆಗೆ ಬರಲು ಜನರು ವ್ಯಸನಮುಕ್ತರಾಗಿ ಮನೆಯ ಪರಿಸ್ಥಿತಿಯನ್ನು ಅರಿತು ಜೀವಿಸಬೇಕು. ಮಹಿಳೆಯರು ಶಿಕ್ಷಣವಂತರಾಗಿ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ತಿಳಿಯಪಡಿಸಬೇಕು. ಮೊಬೈಲ್ನ ಗೀಳು ಹೆಚ್ಚಿಸದೇ ರಾಮಾಯಣ, ಮಹಾಭಾರತ, ಆದರ್ಶ ಪುರುಷರ ಸಾಧನೆಗಳ ಪುಸ್ತಕದ ರುಚಿಯನ್ನು ಮಕ್ಕಳಿಗೆ ಅಂಟಿಸಬೇಕು ಎಂದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ಸಹಾಯಕ ನಿರ್ದೇಶಕ ಜನಾರ್ಧನ ಎಸ್ ಮಾತನಾಡಿ, ಗಾಂಧೀಜಿಯವರ ಆದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಲು ಸರ್ವಧರ್ಮೀಯರು ಸಹಕರಿಸಿದಾಗ ಮಾತ್ರ ಸಾಧ್ಯ. ಮದ್ಯಮ ವರ್ಗ ಹಾಗೂ ಹಿಂದುಳಿದ ವರ್ಗದ ಜನತೆಯು ಮುಖ್ಯವಾಹಿನಿಗೆ ಬರಬೇಕೆಂದರೆ ಕುಡಿತದಿಂದ ದೂರವಿದ್ದು ಅದೇ ಹಣದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಉನ್ನತ ಹುದ್ದೆಗಳಿಗೆ ಕಳಿಸಬೇಕು ಎಂದರು.
ಫಾದರ್ ಸಿಲ್ವೇಸ್ಟರ್ ಪಿರೇರಾ, ಮಂಜುನಾಥ ಜಿ.ಬಿ, ಯೋಜನಾಧಿಕಾರಿ ಸುಬ್ರಹ್ಮಣ್ಯ ಮಾತನಾಡಿದರು. ಹೆಚ್. ಚಂದ್ರಪ್ಪ, ವಿಜಯ್ಕುಮಾರ್, ಟಿ.ಎಮ್. ಕೊಟ್ರಯ್ಯ, ಹಾಲೇಶ್, ಲುಸುಮಾ ಜಗದೀಶ್, ಶೈಲಜಾ, ಎನ್.ಎಸ್. ಮಮತಾ, ಹೆಚ್.ಎಂ. ತಿಪ್ಪೇಸ್ವಾಮಿ, ಲತೀಫಸಾಬ್ ಎಮ್.ಡಿ, ಶೋಭಾ ಬಾಗಳಿ ಮುಂತಾದವರಿದ್ದರು.