ಬೆಂಗಳೂರು:- ಕಾಂಗ್ರೆಸ್ ಸರ್ಕಾರದ್ದು ಪ್ರಚಾರ ಜಾಸ್ತಿ, ಕೆಲಸ ಕಮ್ಮಿಯಾಗಿದೆ ಎಂದು ಹೇಳುವ ಮೂಲಕ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ ‘X’ ಮಾಡಿರುವ ಅವರು, ಹಾಲಿನ ದರವನ್ನು ನಾಲ್ಕೈದು ಬಾರಿ ಏರಿಕೆ ಮಾಡಿದರೂ ರೈತರಿಗೆ ಮಾತ್ರ ಪ್ರೋತ್ಸಾಹ ಧನವನ್ನ ಇನ್ನೂ ನೀಡಿಲ್ಲ. ಸರ್ಕಾರ ಕೂಡಲೇ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದರು.
ನಾವು ಕೃಷಿಕರ ಪರ, ರೈತರ ಪರ ಎಂದು ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಆಗಿದೆ. ಇನ್ನೂ ಪ್ರಚಾರ ಜಾಸ್ತಿ, ಕೆಲಸ ಕಮ್ಮಿ. ಇದು ಸರ್ಕಾರದ ನೀತಿ ಎಂದು ಕಿಡಿಕಾರಿದ್ದಾರೆ. ಕಳೆದ ಆರು ತಿಂಗಳಿಂದ ರಾಜ್ಯದ ರೈತರ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಬರೋಬ್ಬರಿ 656 ಕೋಟಿ ರೂ. ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದು ರೈತರ ಬಗ್ಗೆ ಈ ಸರ್ಕಾರಕ್ಕಿರುವ ಅಸಡ್ಡೆತನವನ್ನು ಸಾಕ್ಷಿಯಾಗಿದೆ ಎಂದು ಅವರು ಅಕ್ರೋಶ ಹೊರಹಾಕಿದ್ದಾರೆ.
ನಿಮ್ಮ ಬಣ್ಣ ಬಣ್ಣದ ಮಾತುಗಳಿಂದ ಅನ್ನದಾತರಿಗೆ ಯಾವುದೇ ಉಪಯೋಗವಿಲ್ಲ. ಹಾಲಿನ ದರವನ್ನು ನಾಲ್ಕೈದು ಬಾರಿ ಏರಿಕೆ ಮಾಡಿದರೂ ರೈತರಿಗೆ ಮಾತ್ರ ಪ್ರೋತ್ಸಾಹ ಧನವನ್ನು ನೀಡಿಲ್ಲ. ಕೂಡಲೇ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.