ಬಳ್ಳಾರಿ:- ಪಂಚಮಸಾಲಿ ಹೋರಾಟಗಾರರ ಮೇಲೆ ಸೇಡಿನಿಂದ ಲಾಠಿಚಾರ್ಜ್ ನಡೆದಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಸರ್ಕಾರ ಸೇಡಿನಿಂದ ಲಾಠಿ ಚಾರ್ಜ್ ಮಾಡಿಸಿ, ಹೋರಾಟಗಾರಿಗೆ ಹಿಂಸೆ ನೀಡಿದೆ.
ಸಿದ್ದರಾಮಯ್ಯ ಸರ್ಕಾರ ಬ್ರಿಟಿಷರ ಮಾದರಿಯಲ್ಲಿ ಭಯಾನಕವಾಗಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಿದೆ. ವಯಸ್ಸು, ಹಿರಿಯರು, ಕಿರಿಯರು ಎನ್ನುವುದನ್ನು ನೋಡದೇ ಹೊಡೆದಿದ್ದಾರೆ ಎಂದು ದೂರಿದರು.
ಹೋರಾಟಕ್ಕೆ ಬೆಂಬಲ ನೀಡಿದ್ದ ಪ್ರತಿಪಕ್ಷದ ನಾಯಕರನ್ನೂ ಬಂಧನ ಮಾಡಿದ್ದಾರೆ. ಅಮಾಯಕ ಜನರನ್ನ ಅಟ್ಟಾಡಿಸಿ ಮನಬಂದಂತೆ ಹೊಡೆದಿದ್ದಾರೆ. ಎಡಿಜಿಪಿ ಅವರು ಓಡೋಡಿ ಬಂದು ಸದನದಲ್ಲಿ ಮುಖ್ಯಮಂತ್ರಿ ಭೇಟಿಯಾದ್ರು. ಐದು ನಿಮಿಷಗಳಲ್ಲಿ ಸಿಎಂ ಹೊರಗೆ ಹೋಗಿ ಎಡಿಜಿಪಿ ಜೊತೆ ಸಭೆ ಮಾಡಿದ್ರು. ಆಮೇಲೆ ಏನೆಲ್ಲಾ ಅನಾಹುತ ಆಗಬೇಕಿತ್ತೋ ಅದೆಲ್ಲಾ ಆಯ್ತು. ಬ್ರಿಟಿಷರಂತೆ ಕೆಟ್ಟ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ ಎಂದು ಸಿಟ್ಟು ಹೊರಹಾಕಿದರು.