ಹುಬ್ಬಳ್ಳಿ: ಮತಾಂಧ ಶಕ್ತಿಗಳಿಗೆ ಕಾಂಗ್ರೆಸ್ ಯಾವಾಗಲೂ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೇಸ್ ವಾಪಸ್ ಪಡೆದಿರುವುದನ್ನು ನಾವು ವಿರೋಧ ಮಾಡಿ ಮನವಿ ಸಲ್ಲಿಸಲು ಅವಕಾಶ ಕೇಳಿದ್ದೇವೆ. ಆದರೆ ನಮ್ಮ ಮನವಿಯನ್ನು ಸಿಎಂ ಸ್ವೀಕಾರ ಮಾಡುತ್ತಿಲ್ಲ. ಇದು ಮುಖ್ಯಮಂತ್ರಿಗಳ ದುರಹಂಕಾರ ತೋರಿಸುತ್ತದೆ ಎಂದಿದ್ದಾರೆ.
ಈ ಮೂಲಕ ಸಿದ್ದರಾಮಯ್ಯ ಭಯೋತ್ಪಾದಕರ ಬೆಂಬಲಿಗರು ಎಂಬತಾಗುತ್ತದೆ. ನಾವು ಮನವಿ ಕೊಡೋದು ತಪ್ಪಾ? ಇದು ಎಂತಹ ಅಪಹ್ಯಾಸ ಎಂದು ಕಿಡಿಕಾರಿದ್ದಾರೆ. ಇನ್ನೂ ನಾವು ಸಮಾಜ ವಿದ್ರೋಹಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಮತಾಂಧರು ಪೊಲೀಸರ ಹತ್ಯೆ ಮಾಡಲು, ಠಾಣೆ ಸುಡಲು ಪ್ರಯತ್ನ ಮಾಡಿದ್ದರು. ಆದರೆ ಇಂದು ಕೇಸ್ ವಾಪಸ್ ಪಡೆದಿರುವುದು ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ.
ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಪೊಲೀಸರು ಇಂದು ಅನೇಕ ರೋಡ್ ಬಂದ್ ಮಾಡುತ್ತಿದ್ದಾರೆ. ಕ್ಷುಲ್ಲಕ, ವೋಟ್ಬ್ಯಾಂಕ್ ರಾಜಕೀಯಕ್ಕೆ ಮಿತಿ ಇರಬೇಕು. ಮತಾಂಧ ಶಕ್ತಿಗಳಿಗೆ ಕಾಂಗ್ರೆಸ್ ಯಾವಾಗಲೂ ಬೆಂಬಲ ನೀಡುತ್ತಿದೆ. ನಮ್ಮ ಮನವಿ ಸಿಎಂ ತೆಗೆದುಕೊಳ್ಳಬೇಕು. ಇಲ್ಲವಾದರೆ ನಾವು ಹೋರಾಟ ಮಾಡುತ್ತೇವೆ. ಅವರು ಸ್ವೀಕಾರ ಮಾಡಿಲ್ಲ ಅಂದರೆ ನಾನು ನುಗ್ಗಿ ಮನವಿ ನೀಡುತ್ತೇವೆ ಎಂದಿದ್ದಾರೆ.