ವಿಜಯಸಾಕ್ಷಿ ಸುದ್ದಿ, ಗದಗ : ಪ್ರಸ್ತುತ ಲೋಸಭಾ ಚುನಾವಣೆ ಮುಂದಿನ ಜನಾಂಗಕ್ಕಾಗಿ ನಡೆಯುತ್ತಿದೆ. ಮೋದಿಯವರು ಮುತ್ಸದ್ದಿ ನಾಯಕರು. ಅವರು ಮುಂದಿನ ಜನಾಂಗದ ಬಗ್ಗೆ ಯೋಚನೆ ಮಾಡುತ್ತಾರೆ. ಹಿಂದಿನ ರಾಜಕಾರಣಿಗಳು ಯುವಕರು, ಬಡವರ ಬಗ್ಗೆ ಯೋಚನೆ ಮಾಡಲಿಲ್ಲ. ಕೇವಲ ಕೆಲವು ಜನರ ಓಲೈಕೆಗೆ ತುಷ್ಟೀಕರಣ ರಾಜಕಾರಣ ಮಾಡಿ ತಮ್ಮ ರಾಜಕಾರಣ ಮುಂದೆ ಮಾಡಿಕೊಂಡು ದೇಶವನ್ನು ಹಿಂದೆ ತಳ್ಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಅವರು ಗದುಗಿನಲ್ಲಿ ರವಿವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ `ಯುವ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ನವರು 1975ರಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಹಾಕಿದರು. ಎಷ್ಟೋ ಜನರ ಕಗ್ಗೊಲೆಯಾಯಿತು. ಆರ್ಟಿಕಲ್ 42ಕ್ಕೆ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ, ಸಂವಿಧಾನಕ್ಕೆ ಮರ್ಯಾದೆ ಕೊಡದವರು, ಈಗ ಸಂವಿಧಾನ ಬದಲಾಯಿಸುತ್ತಾರೆ ಎಂದು ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನವರು ಮತ್ತೆ ಗ್ಯಾರಂಟಿ ಬಗ್ಗೆ ಹೇಳುತ್ತಿದ್ದಾರೆ. ಜನರ ಮನೆಗೆ ನೀರು, ಕರೆಂಟ್, ರಸ್ತೆ, ರೈತರ ಹೊಲಕ್ಕೆ ವಿದ್ಯುತ್ ಇಲ್ಲದಿದ್ದರೆ ಎಷ್ಟು ದುಡ್ಡು ಕೊಟ್ಟರೆ ಏನು ಪ್ರಯೋಜನ? ಮೋದಿಯವರು ದುಡಿಮೆಯ ಬಗ್ಗೆ ಮಾತನಾಡುತ್ತಾರೆ. ತಾವೂ ದುಡಿಯುತ್ತಾರೆ. ಎಲ್ಲರನ್ನೂ ದುಡಿಯುವಂತೆ ಪ್ರೇರೇಪಿಸುತ್ತಿದ್ದಾರೆ ಎಂದು ಹೇಳಿದರು.
ಗದಗ ನಗರವನ್ನು ಔದ್ಯೋಗಿಕ ಕೇಂದ್ರವನ್ನಾಗಿ ಮಾಡುವ ಕನಸಿದೆ. ಟೆಕ್ಸ್ಟೈಲ್ ಹಾಗೂ ಫುಡ್ ಪ್ರೊಸೆಸ್ಸಿಂಗ್ ಉದ್ಯಮಕ್ಕೆ ಹೆಚ್ಚಿನ ಅವಕಾಶ ಇದೆ. ಸಿಂಗಟಾಲೂರು ಯೋಜನೆ ಮೂಲಕ ರೈತರ ಹೊಲಗಳಿಗೆ ನೀರು ಹರಿಸಿ ನೀರಾವರಿ ಕಲ್ಪಿಸಲಾಬುವುದು. ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸಿ, ಅನ್ನ-ನೀರು ಕೊಟ್ಟಿರುವ ನಾಯಕ ಮೋದಿ ಅವರಿಗೆ ಮತ ಹಾಕುವ ಮೂಲಕ ಋಣ ತೀರಿಸುವ ಕೆಲಸ ಮಾಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಸಿ.ಸಿ. ಪಾಟೀಲ್, ವಿಧಾನ ಪರಿಷತ್ ಸದಸ್ಯಎಸ್.ವಿ. ಸಂಕನೂರು, ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಮುಖಂಡರು ಹಾಜರಿದ್ದರು.
ಮೋದಿಯವರು ದೇಶದ ಜನರಿಗೆ ಶಾಶ್ವತ ಯೋಜನೆಗಳನ್ನು ನೀಡುತ್ತಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 4 ಕೋಟಿ ಮನೆ ನೀಡಿದ್ದಾರೆ. ಉಜ್ವಲ ಯೋಜನೆ ಅಡಿಯಲ್ಲಿ ಮನೆ ಮನೆಗೆ ಗ್ಯಾಸ್ ಸಂಪರ್ಕ, ಜಲ ಜೀವನ್ ಮಿಷನ್ ಅಡಿಯಲ್ಲಿ 75 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿದ್ದಾರೆ.
ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ ಮಾಡಿ ಹೆಣ್ಣು ಮಕ್ಕಳ ಗೌರವ ಕಾಪಾಡಿದ್ದಾರೆ. ದೇಶದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗಿದೆ. ಈ ದೇಶದ ಪ್ರತಿಯೊಬ್ಬ ಭಾರತೀಯ ತಾನು ಭಾರತೀಯ ಎಂದು ಮುಕ್ತವಾಗಿ ಹೇಳುವಂತೆ ಮಾಡಿದ್ದಾರೆ.
– ಬಸವರಾಜ ಬೊಮ್ಮಾಯಿ.
ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.